ಮುಂಬೈ: ವಾಂಕೆಡೆ ಕ್ರೀಡಾಂಗಣದಲ್ಲಿ ತಮಿಳುನಾಡಿನ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ಸ್ ಪಂದ್ಯದಲ್ಲಿ ಕರ್ನಾಟಕ ದಿನದಾಟದ ಅಂತ್ಯಕ್ಕೆ ೪೮೪ ರನ್ನುಗಳ ಭಾರಿ ಮುನ್ನಡೆ ಗಳುಹಿಸಿದೆ. ದಿನದ ಅಂತ್ಯಕ್ಕೆ ಕರ್ನಾಟಕ ೭ ವಿಕೆಟ್ ನಷ್ಟಕ್ಕೆ ೬೧೮ ರನ್ ಗಳಿಸಿದೆ.
ನೆನ್ನೆ ಶತಕ ಗಳುಹಿಸಿದ್ದ ಕೆ ಎಲ್ ರಾಹುಲ್ ಮತ್ತು ಕೆ ಕೆ ನಾಯರ್ ಇಂದು ಇನ್ನಿಂಗ್ಸ್ ಮುಂದುವರೆಸಿದರು. ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಇಬ್ಬರೂ ಆಟಗಾರರು ಕರ್ನಾಟಕ ಬೃಹತ್ ಮೊತ್ತ ಪೇರಿಸುವುದಕ್ಕೆ ಸಹಾಯ ಮಾಡಿದರು. ಕೆ ಎಲ್ ರಾಹುಲ್ ದ್ವಿಶತಕದ ಅಂಚಿಗೆ ಬಂದು ಎಡವಿ ೧೮೮ ರನ್ ಗಳಿಸಿ ಔಟಾದರು. ಆದರೆ ತಮ್ಮ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮುಂದುವರೆಸಿದ ನಾಯರ್ 'ತ್ರಿಶತಕ' ಗಳುಹಿಸಿ ಕರ್ನಾಟಕಕ್ಕೆ ನಿಚ್ಚಳ ೪೮೪ ರನ್ನುಗಳ ಮುನ್ನಡೆ ಒದಗಿಸಿಕೊಡುವುದಕ್ಕೆ ಸಹಕರಿಸಿದರು.
ಕರ್ನಾಟಕ ತಂಡದ ನಾಯಕ ವೇಗಿ ವಿನಯ್ ಕುಮಾರ್ ಕೂಡ ಇವರಿಗೆ ಉತ್ತಮ ಸಾಥ್ ನೀಡಿ ದಿನದಂತ್ಯಕ್ಕೆ ೪೧ ರನ್ ಗಳಿಸಿದ್ದರು. ನಾಳೆ ಬೆಳಗ್ಗೆ ಕರ್ನಾಟಕ ಇನ್ನಿಂಗ್ ಡ್ರಾ ಮಾಡಿಕೊಂಡು ಎದುರಾಳಿಗಳನ್ನು ಬೇಗ ಔಟ್ ಮಾಡಿ ಇನ್ನಿಂಗ್ಸ್ ಗೆಲುವು ಸಾಧಿಸುವ ಇರಾದೆ ಕರ್ನಾಟಕ ತಂಡದ್ದು. ಇನ್ನೂ ಎರಡು ದಿನದ ಆಟ ಬಾಕಿಯಿದ್ದು, ನಿಚ್ಚಳ ಫಲಿತಾಂಶ ಹೊರಬೀಳುವಂತಿದೆ.
Advertisement