ಮುಂಬೈ: ಇಂಡಿಯನ್ ಓಪನ್ ವಿಶ್ವ ರ್ಯಾಂಕಿಂಗ್ ಸ್ನೂಕರ್ ನಲ್ಲಿ ಬುಧವಾರ ಭಾರತಕ್ಕೆ ದುರ್ದಿನವಾಗಿ ಪರಿಣಮಿಸಿತು. ಸ್ನೂಕರ್ ವಿಶ್ವಚಾಂಪಿಯನ್ ಪಂಕಜ್ ಆಡ್ವಾಣಿ, ಟೂರ್ನಿಯ ಆರಂಭಿಕ ಸುತ್ತಿನಲ್ಲಿ ಸೋಲು ಕಂಡು ಪಂದ್ಯಾವಳಿಯಿಂದ ಆಚೆ ನಡೆದಿದ್ದಾರೆ.
ಮಂಗಳವಾರ ನಡೆದ ಪಂದ್ಯದಲ್ಲಿ ಸ್ಕಾಟ್ಲೆಂಡ್ನ ರಿಯಾಸ್ ಕ್ಲಾರ್ಕ್ ವಿರುದ್ಧ ಸೆಣಸಿದ ಅವರು, 4-3 ಅಂಕಗಳ ಅಂತರದಲ್ಲಿ ಸೋಲು ಕಂಡರು. ಎರಡು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಪಂದ್ಯದಲ್ಲಿ ಇಬ್ಬರೂ ಸಮಬಲದ ಹೋರಾಟ ನೀಡಿದ್ದು ತೀವ್ರ ಕುತೂಹಲ ಮೂಡಿಸಿತ್ತು. ಆದರೆ, ವಿಶ್ವ ಚಾಂಪಿಯನ್ ಅನ್ನು ಮಣಿಸುವಲ್ಲಿ ಯಶಸ್ವಿಯಾದ 20 ವರ್ಷದ ಕ್ಲಾರ್ಕ್ ಅಂತಿಮವಾಗಿ ಜಯದ ನಗೆ ಬೀರಿದರು.
ಪಂಕಜ್ ನಿರ್ಗಮನ ಸೇರಿದಂತೆ ಪಂದ್ಯಾವಳಿಗೆ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದ ಎಲ್ಲ ಆರು ಭಾರತೀಯ ಆಟಗಾರರೂ ಟೂರ್ನಿಯಿಂದ ಆಚೆ ನಡೆದಿದ್ದಾರೆ. ಧರ್ಮೇಂದ್ರ ಲಿಲ್ಲಿ, ಸುಮಿತ್ ತಲ್ವಾರ್,ನೀರಜ್ ಕುಮಾರ್, ಫೈಸಲ್ ಖಾನ್ ಹಾಗೂ ಬ್ರಿಜೇಶ್ ದಮಾನಿ ಅವರೂ ತಮ್ಮ ಮೊದಲ ಸುತ್ತಿನ ಪಂದ್ಯಗಳಲ್ಲಿ ಸೋಲಿನ ಕಹಿ ಅನುಭವಿಸಿದ್ದರು.
ಮತ್ತೊಂದು ನಿರಾಸೆ ಅರ್ಹತಾ ಸುತ್ತಿನ ಮೂಲಕ ಮುಖ್ಯ ಪಂದ್ಯಾವಳಿಗೆ ಆಡಲು ಅರ್ಹತೆ ಗಳಿಸಿದ್ದ ಆದಿತ್ಯ ಮೆಹ್ತಾ ಕೊಂಚ ಭರವಸೆ ಮೂಡಿಸಿದ್ದರಾದರ, ಬುಧವಾರ ನಡೆದ ಪಂದ್ಯದಲ್ಲಿ ಮಾರ್ಕ್ ಕಿಂಗ್ ವಿರುದ್ಧ ಸೋಲು ಕಾಣುವ ಮೂಲಕ ಟೂರ್ನಿಯಿಂದ ಆಚೆ ನಡೆಸಿದ್ದಾರೆ.
Advertisement