ಮುಂಬೈ: ಐಪಿಎಲ್ ನಲ್ಲಿ ಭಾನುವಾರ ತೀವ್ರ ಕುತೂಹಲ ಮೂಡಿಸಿದ್ದ ಮುಂಬೈ ವಿರುದ್ಧ ಪಂದ್ಯದಲ್ಲಿ ಬೆಂಗಳೂರು ತಂಡ 39 ರನ್ ಗಳ ಭರ್ಜರಿ ಜಯ ದಾಖಲಿಸಿದೆ.
ಐಪಿಎಲ್ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 39 ರನ್ಗಳ ಭರ್ಜರಿ ಜಯ ಸಾಧಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ವಿರಾಟ್ ಕೊಹ್ಲಿ ಪಡೆ ಎಬಿ ಡಿವಿಲಿಯರ್ಸ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಲು 236 ರನ್ಗಳ ಬೃಹತ್ ಸವಾಲು ನೀಡಿತ್ತು. ಆದರೆ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿದ ರೋಹಿತ್ ಶರ್ಮಾ ಪಡೆ ಅಂತಿಮವಾಗಿ ಆರ್ಸಿಬಿ ಎದುರು ಸೋಲೊಪ್ಪಿಕೊಂಡಿತು.
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡ ಆರ್ ಸಿಬಿ ತಂಡಕ್ಕೆ ಎಬಿ ಡಿವಿಲಿಯರ್ಸ್ ಅವರ ಸ್ಫೋಟಕ ಬ್ಯಾಟಿಂಗ್ ಪಂದ್ಯ ಗೆಲ್ಲಲು ನೆರವಾಯಿತು. ಕಳೆದ ಪಂದ್ಯದ ಹೀರೋ ಕ್ರಿಸ್ ಗೇಯ್ಲ್ ಪಂದ್ಯದ 4ನೇ ಓವರ್ ನಲ್ಲಿಯೇ ಔಟ್ ಆಗಿದ್ದು, ಆರ್ ಸಿಬಿ ತಂಡಕ್ಕೆ ದೊಡ್ಡ ಹೊಡೆತ ಎಂದು ಪರಿಗಣಿಸಲಾಗಿತ್ತಾದರೂ, ಗೇಯ್ಲ್ ಸ್ಥಾನವನ್ನು ಎಬಿಡಿ ತುಂಬಿದರು.
ಸ್ಫೋಟಕ ಬ್ಯಾಟ್ಸ್ ಮನ್ ಗೇಯ್ಲ್ ವಿಕೆಟ್ ಪತನದ ಬಳಿಕ ಭರ್ಜರಿ ಬ್ಯಾಟಿಂಗ್ ಮಾಡಿದ ಎಬಿಡಿ ಕೇವಲ 59 ಎಸೆತಗಳಲ್ಲಿ 133 ರನ್ ಸಿಡಿಸಿ ಅಜೇಯರಾಗಿ ಉಳಿದರು. ಎಬಿಡಿಗೆ ನಾಯಕ ವಿರಾಟ್ ಕೊಹ್ಲಿ ಉತ್ತಮ ಸಾಥ್ ನೀಡಿದರು. 50 ಎಸೆತಗಳನ್ನು ಎದುರಿಸಿದ ಕೊಹ್ಲಿ ಭರ್ಜರಿ 82 ರನ್ ಸಿಡಿಸಿದರು. ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ ಬೆಂಗಳೂರು ತಂಡ 235 ರನ್ ಗಳ ಬೃಹತ್ ಮೊತ್ತವನ್ನು ಪೇರಿಸಿತು.
ಆರ್ ಸಿಬಿ ನೀಡಿದ 236 ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಮುಂಬೈ ತಂಡಕ್ಕೆ ಲೆಂಡಿ ಸಿಮಾನ್ಸ್ (68 ರನ್, 53 ಎಸೆತ), ಕೀರನ್ ಪೊಲಾರ್ಡ್ (49 ರನ್, 24 ಎಸೆತ) ನೆರವಾದರಾದರೂ ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಇವರಿಬ್ಬರನ್ನು ಹೊರತು ಪಡಿಸಿ ತಂಡದ ಉಳಿದಾವ ಆಟಗಾರನೂ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನೆಲೆಯೂರುವ ಸಾಹಸ ಮಾಡಲಿಲ್ಲ. ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಆತುರದ ಆಟಕ್ಕೆ ಮುಂದಾಗಿ ಕೇವಲ 15 ರನ್ ಗಳಿಸಿ ಹರ್ಷಲ್ ಪಟೇಲ್ ಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಮುಂಬೈ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 196 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಆರ್ ಸಿಬಿ ಎದುರು 39 ರನ್ ಗಳ ಸೋಲೊಪ್ಪಿಕೊಂಡಿತು.
ಆರ್ ಸಿಬಿ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದ ಎಬಿ ಡಿವಿಲಿಯರ್ಸ್ ಅರ್ಹವಾಗಿಯೇ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
Advertisement