ಭಾರತಕ್ಕೆ ಮುಳುವಾದ ಕಳಪೆ ಬ್ಯಾಟಿಂಗ್: ಮೊದಲ ಇನ್ನಿಂಗ್ಸ್ ನಲ್ಲಿ 215ಕ್ಕೆ ಆಲ್ ಔಟ್

ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಾಗಪುರದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 215ರನ್ ಗಳಿಗೆ ಆಲ್ ಔಟ್ ಆಗಿದೆ...
ವಿದರ್ಭ ಟೆಸ್ಟ್ ಪಂದ್ಯ (ಚಿತ್ರಕೃಪೆ: ಕ್ರಿಕ್ ಇನ್ಫೋ)
ವಿದರ್ಭ ಟೆಸ್ಟ್ ಪಂದ್ಯ (ಚಿತ್ರಕೃಪೆ: ಕ್ರಿಕ್ ಇನ್ಫೋ)

ನಾಗಪುರ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಾಗಪುರದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 215ರನ್ ಗಳಿಗೆ ಆಲ್ ಔಟ್ ಆಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಶಿಖರ್ ಧವನ್ ಮತ್ತು ಮುರಳಿ ವಿಜಯ್ ಜೋಡಿ ಅರ್ಧ ಶತಕದ ಜೊತೆಯಾಟ ಆಡುವ  ಮೂಲಕ ಉತ್ತಮ ಆಟವಾಡುವ ಸೂಚನೆ ನೀಡಿತು. ಈ ಹಂತದಲ್ಲಿ ದ.ಆಫ್ರಿಕಾ ಪರ ದಾಳಿಗಿಳಿದ ಎಲ್ಗರ್ ಅವರು 12 ರನ್ ಗಳಿಸಿದ್ದ ಶಿಖರ್ ಧವನ್ ಅವರನ್ನು ಔಟ್ ಮಾಡಿದರು. ಎಲ್ಗರ್ ಅವರ  ಎಸೆತವನ್ನು ತಪ್ಪಾಗಿ ಅರ್ಥೈಸಿಕೊಂಡ ಧವನ್ ಅವರಿಗೇ ಕ್ಯಾಚಿತ್ತು ಹೊರನಡೆದರು.

ಕ್ರೀಸ್ ನ ಮತ್ತೊಂದು ತುದಿಯಲ್ಲಿ ಉತ್ತಮವಾಗಿ ಆಡುತ್ತಿದ್ದ ಮುರಳಿ ವಿಜಯ್ ಪೂಜಾರ ಜೊತೆಗೂಡಿ ಉತ್ತಮ ಆಟವಾಡುವ ಭರವಸೆ ನೀಡಿದರಾದರೂ, 22ನೇ ಓವರ್ ನಲ್ಲಿ ಮಾರ್ಕೆಲ್ ಅವರಿಗೆ  ಎಲ್ ಬಿ ಬಲೆಗೆ ಬಿದ್ದರು. ಬಳಿಕ ಬಂದ ಯಾವೊಬ್ಬ ಆಟಗಾರನೂ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಂತು ಆಟವಾಡುವ ಪ್ರಯತ್ನ ಮಾಡಲಿಲ್ಲ. ನಾಯಕ ವಿರಾಟ್ ಕೊಹ್ಲಿ, ಮಧ್ಯಮ ಕ್ರಮಾಂಕದ  ಅಂಜಿಕ್ಯಾ ರಹಾನೆ ಕೂಡ ಕ್ರಮವಾಗಿ 22 ರನ್ ಮತ್ತು 13 ರನ್ ಗಳಿಗೇ ನಿರ್ಗಮಿಸುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಆ ಮೂಲಕ ಭಾರತ ತಂಡದ ಪೆವಿಲಿಯನ್ ಪರೇಡ್  ಆರಂಭವಾಯಿತು ಎನ್ನಬಹುದು.

ಅಂತಿಮವಾಗಿ ಭಾರತ ತಂಡ 78.2 ಓವರ್ ಗಳಲ್ಲಿ 215ರನ್ ಗಳಿಗೆ ಆಲ್ ಔಟ್ ಆಯಿತು. ದಕ್ಷಿಣ ಆಫ್ರಿಕಾ ಪರ ಮಾರ್ಕೆಲ್ 3 ವಿಕೆಟ್, ಹಾರ್ಮರ್ 4 ವಿಕೆಟ್ ಪಡೆದರೆ, ರಬಾಡ, ಎಲ್ಗರ್ ಮತ್ತು  ಇಮ್ರಾನ್ ತಾಹಿರ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

ಪ್ರಸ್ತುತ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ದಕ್ಷಿಣ ಆಪ್ರಿಕಾ ತಂಡ 3 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 4 ರನ್ ಗಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com