ಕರಾಚಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಸದಾ ಶಾಂತಿ ಏರ್ಪಡಬೇಕು ಆದರ ಕ್ರಿಕೆಟ್ ವಿಷಯಕ್ಕೆ ಬಂದಾಗ ಪಾಕಿಸ್ತಾನ ಭಾರತದ ಮೇಲೆ ಯಾವಾಗಲೂ ಗೆಲ್ಲಬೇಕು ಎಂಬುದು ನನ್ನ ಆಸೆ ಎಂದು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸಫ್ ಝಾಯಿ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಮಾನವ ಹಕ್ಕುಗಳ ಕಾರ್ಯಕರ್ತೆ, ಭಾರತ ಮತ್ತು ಪಾಕಿಸ್ತಾನದ ನಡುವೆ ಒಳ್ಳೆಯ ಸಂಬಂಧ ನೆಲಸಬೇಕು, ಆದರೆ ಕ್ರಿಕೆಟ್ ನಲ್ಲಿ ಪಾಕಿಸ್ತಾನವೇ ಗೆಲ್ಲಬೇಕು ಎಂದು ತಿಳಿಸಿರುವುದಾಗಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಮುಂದೊಂದು ದಿನ ಪಾಕಿಸ್ತಾನಕ್ಕೆ ಹಿಂದಿರುಗಿ ಅವರ ತಾಯ್ನಾಡಿನ ಜನರ ಸೇವೆ ಮಾಡುವ ಇಂಗಿತವನ್ನು ಕೂಡ ಮಲಾಲ ವ್ಯಕ್ತಪಡಿಸಿದ್ದಾರೆ.
ಭಾರತೀಯ ಜನರು ತಮ್ಮ ಮೇಲೆ ವ್ಯಕ್ತಪಡಿಸಿರುವ ಅಪಾರ ಪ್ರೀತಿಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿರುವ ಅವರು ಭಾರತಕ್ಕೆ ಕೂಡ ಭೇಟಿಕೊಡುವ ಆಸೆಯನ್ನು ತಿಳಿಸಿದ್ದಾರೆ. ಅದರಲ್ಲೂ ದೆಹಲಿ ಮತ್ತು ಮುಂಬೈಗೆ ಭೇಟಿ ನೀಡಿ ಯುವ ಹೆಣ್ಣು ಮಕ್ಕಳಿಗೆ ಸ್ಫೂರ್ತಿ ತುಂಬುವಾಸೆ ಇದೆ ಎಂದಿದ್ದಾರೆ.
ತಂದೆ ನನ್ನ ಸ್ಫೂರ್ತಿಗೆ ಮೂಲ ಎಂದು ಮತ್ತೆ ತಿಳಿಸಿದ್ದು, ಅವರು ಸತ್ಯ ನುಡಿಯುವಂತೆ ಸದಾ ಪ್ರೇರೇಪಿಸಿದ್ದು ತಾಯಿ ಎಂದು ಅವರು ಹೇಳಿದ್ದಾರೆ.
Advertisement