ಪೋರ್ಟ್ ಆಫ್ ಸ್ಪೇನ್: ತಮ್ಮ ತರಬೇತುದಾರ ರಾಜ್ ಕುಮಾರ್ ಶರ್ಮಾ ಅವರಿಗೆ ಈ ವರ್ಷದ ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿ ದೊರೆತಿರುವುದಕ್ಕೆ ಭಾರತೀಯ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿನಂದಿಸಿದ್ದಾರೆ.
ಸೋಮವಾರ ಈ ಪ್ರಶಸ್ತಿಗೆ ಇತರ ಮೂವರ ಜೊತೆಗೆ ಶರ್ಮಾ ಅವರ ಹೆಸರು ಕೂಡ ಧೃಢೀಕರಣಗೊಂಡ ನಂತರ ಕೊಹ್ಲಿ ಟ್ವಿಟ್ಟರ್ ಮೂಲಕ ಅಭಿನಂದಿಸಿದ್ದಾರೆ. ಆಗಸ್ಟ್ 29 ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
"ರಾಜ್ ಕುಮಾರ್ ಸರ್ ಅಭಿನಂದನೆಗಳು. ದೊಡ್ಡ ಚಿತ್ರದ ಹಿಂದಿನ ಶ್ರಮದಾಯಕ ಕೆಲಸ ಗುರುತಿಸುವುದೇ ಇಲ್ಲ. ನಿಮಗೆ ದ್ರೋಣಾಚಾರ್ಯ ಪ್ರಶಸ್ತಿ ಸಿಕ್ಕಿರುವುದಕ್ಕೆ ಸಂತಸವಾಗಿದೆ" ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.
ಜೀವಮಾನ ಸಾಧನೆಗಾಗಿ ಈಜು ತರಬೇತುದಾರ ಎಸ್ ಪ್ರದೀಪ್ ಕುಮಾರ್ ಮತ್ತು ಕುಸ್ತಿ ತರಬೇತುದಾರ ಮಹಾಬೀರ್ ಸಿಂಗ್ ಅವರಿಗೆ ಕೂಡ ದ್ರೋಣಾಚಾರ್ಯ ಪ್ರಶಸ್ತಿ ನೀಡಲಾಗಿದೆ. ಐದು ಲಕ್ಷ ನಗದು, ಪದಕ ಮತ್ತು ಪ್ರಮಾಣಪತ್ರವನ್ನು ಈ ಪ್ರಶಸ್ತಿ ಒಳಗೊಂಡಿದೆ.