ಮೈಸೂರು: ಅದೃಷ್ಟದ ಬಲದಿಂದ ಹೇಗೂ ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶ ಪಡೆದಿದ್ದ ಆತಿಥೇಯ ಕರ್ನಾಟಕ, ದೊರೆತ ಒಂದೊಳ್ಳೆಯ ಅವಕಾಶವನ್ನು ಸದುಪಯೋಗಿಸಿಕೊಳ್ಳುವಲ್ಲಿ ಎಡವಿದ ಪರಿಣಾಮ 66ನೇ ರಾಷ್ಟ್ರೀಯ ಹಿರಿಯರ ಬಾಸ್ಕೆಟ್ಬಾಲ್ ಚಾಂಪಿಯನ್ಶಿಪ್ ಪಂದ್ಯಾವಳಿಯಿಂದ ಹೊರಬಿದ್ದಿತು. ಬುಧವಾರವಷ್ಟೇ ವನಿತೆಯರ ತಂಡವು ಹೊರಬಿದ್ದಿದ್ದರಿಂದ ಪುರುಷರ ತಂಡದ ಮೇಲೆ ಅಪಾರ ನಿರೀಕ್ಷೆ ಇರಿಸಿಕೊಳ್ಳಲಾಗಿತ್ತು. ಆದರೆ, ಗುರುವಾರ ನಡೆದ ಕ್ವಾರ್ಟರ್ಫೈನಲ್ನಲ್ಲಿ ಅದು ಸರ್ವೀಸ್ ವಿರುದ್ಧ ಸೋತು ಟೂರ್ನಿಯಿಂದ ನಿರ್ಗಮಿಸಿತು. ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಸರ್ವೀಸ್ ತಂಡವು, ಕರ್ನಾಟಕ ತಂಡವನ್ನು 89-63 ಅಂತರದಿಂದ ಮಣಿಸಿತು. ಆರಂಭದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರೂ ಸರ್ವೀಸ್ ತಂಡದ ನರೇಂದರ್ ಗ್ರೇವಲ್ (24) ಮತ್ತು ಜೋಗಿಂದರ್ ಸಿಂಗ್ (17) ಅವರ ಅಭೂತಪೂರ್ವ ಪ್ರದರ್ಶನದ ಎದುರು ಕರ್ನಾಟಕದ ಆಟಗಾರರು ಮಂಕಾದರು. ಆದಾಗ್ಯೂ ರಾಜ್ಯ ತಂಡದ ಪರ ಅನಿಲಕುಮಾರ್ (20) ಮತ್ತು ಅರವಿಂದ ಆರ್ಮುಗಂ (12) ಅಂಕ ಗಳಿಸಿದರು. ವಿಜೇತ ತಂಡದ ಪರ ನರೇಂದರ್ ಗ್ರೇವಲ್ (24), ಜೋಗಿಂದರ್ ಸಿಂಗ್ (17) ಮತ್ತು ಜಯರಾಂ ಜಾಟ್ 15 ಅಂಕ ಗಳಿಸಿದರು. ರೇಲ್ವೇಸ್ಗೆ ಆಘಾತ: ಇನ್ನು ಮತ್ತೊಂದು ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಉತ್ತರಾಖಂಡ ತಂಡವು, ಇಂಡಿಯನ್ ರೈಲ್ವೇಸ್ ತಂಡವನ್ನು 84-64 ಅಂತರದಿಂದ ಮಣಿಸಿ ಆಘಾತ ನೀಡಿತು. ಉತ್ತರಾಖಂಡ ಪರ ವಿಶೇಶ್ 26 ಮತ್ತು ತ್ರೀದೀಪ್ ರೈ 22 ಅಂಕಗಳಿಸಿದರೆ, ರೈಲ್ವೇಸ್ ಪರ ಹಿಮಾಂಶು ಶರ್ಮ 16 ಅಂಕ ಗಳಿಸಿದರು. ಇನ್ನು ಮಹಿಳೆಯರ ವಿಭಾಗದಲ್ಲಿ ದೆಹಲಿ ತಂಡವು, ಛತ್ತೀಸ್ಗಡ ತಂಡವನ್ನು 84-76 ಅಂತರದಿಂದ ಮಣಿಸಿತು. ದೆಹಲಿ ತಂಡದ ಪರ ಪ್ರತಿಮಾ ಸಿಂಗ್ 36, ಪ್ರಶಾಂತಿ ಸಿಂಗ್ 24 ಅಂಕ ಗಳಿಸಿದರೆ, ಛತ್ತೀಸಗಡ ತಂಡದ ಪರ ಅಭೂತ ಪೂರ್ವ ಪ್ರದರ್ಶನ ನೀಡಿದ ಪೂನಮï ಚತುರ್ವೇದಿ (44 ಅಂಕ) ಭರ್ಜರಿ ಪ್ರದರ್ಶನ ನೀಡಿದರೂ, ಅವರ ಈ ಪ್ರಯತ್ನ ವಿಫಲವಾಯಿತು.
Advertisement