ಲಂಡನ್: ಅಂಪೈರ್ ಗಳ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಬೆಳ್ಳಿಗೆ ತೃಪ್ತಿ ಪಟ್ಟುಕೊಂಡಿರುವ ಭಾರತ ಹಾಕಿ ತಂಡ ಇದೀಗ ಅಂತಾರಾಷ್ಟ್ರೀಯ ಹಾಕಿ ಸಂಸ್ಥೆಗೆ ಈ ಸಂಬಂಧ ಅಧಿಕೃತ ದೂರು ಸಲ್ಲಿಸಿದೆ.
ನಿನ್ನೆ ಲಂಡನ್ ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಶೂಟ್ ಔಟ್ ವೇಳೆ ಅಂಪೈರ್ ಗಳು ನೀಡಿದ ತೀರ್ಪುಗಳು ಆಸ್ಟ್ರೇಲಿಯಾ ತಂಡಕ್ಕೆ ವರವಾಗಿ ಪರಿಣಮಿಸಿ ಭಾರತ 1-3 ಅಂತರದಿಂದ ಸೋಲುವಂತಾಗಿತ್ತು. ಪೆನಾಲ್ಟಿ ಶೂಟೌಟ್ನಲ್ಲಿ ಆಸ್ಟ್ರೇಲಿಯಾದ ಬೇಲೆ ಅವರಿಗೆ 2ನೇ ಅವಕಾಶ ನೀಡಿದ ಕುರಿತು ಭಾರತ ತಂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪೆನಾಲ್ಟಿ ಶೂಟೌಟ್ ವೇಳೆ ಬೇಲೆ ಚೆಂಡು ಬಾರಿಸುವಾಗ ಗೋಲ್ ಪೋಸ್ಟ್ ಬಳಿ ಸ್ವಲ್ಪ ಅಡಚಣೆ ಉಂಟಾದ ಕಾರಣ ಬೇಲೆ ಅವರಿಗೆ 2ನೇ ಅವಕಾಶ ನೀಡಲಾಯಿತು. ಭಾರತ ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿತು. ನಂತರ ಅಂಪೈರ್ಗಳು, ಪಂದ್ಯದ ರೆಫ್ರಿ ಮತ್ತು ಟೂರ್ನಿಯ ಆಯೋಜಕರು ಮೈದಾನಕ್ಕಿಳಿದು 1 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ಹಾಗಾಗಿ ಫಲಿತಾಂಶ ಪ್ರಕಟವಾಗಲು 1 ಗಂಟೆ ವಿಳಂಬವಾಗಿತ್ತು.
ಬೇಲೆ ಚೆಂಡು ಬಾರಿಸಲು ಸಿದ್ಧತೆ ನಡೆಸುವಾಗ 7ನೇ ಸೆಕೆಂಡ್ನಲ್ಲಿ ಭಾರತದ ಗೋಲ್ ಕೀಪರ್ ಪಿ.ಆರ್.ಶ್ರೀಜೀಶ್ ಅನುದ್ದೇಶಿತವಾಗಿ ಸ್ವಲ್ಪ ಅಡಚಣೆ ಮಾಡಿದ್ದರು. ಹಾಗಾಗಿ ಬೇಲೆಗೆ 2ನೇ ಅವಕಾಶ ನೀಡಲಾಯಿತು ಎಂದು ತೀರ್ಪುಗಾರರು ತೀರ್ಮಾನಿಸಿದ ಕಾರಣ ಭಾರತ ಪಂದ್ಯದಲ್ಲಿ ಸೋಲು ಒಪ್ಪಿಕೊಂಡು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿತು.
ಇದೀಗ ಈ ವಿವಾದತ್ಮಕ ತೀರ್ಪಿನ ವಿರುದ್ಧ ಭಾರತ ಹಾಕಿ ತಂಡ ಅಂತಾರಾಷ್ಟ್ರೀಯ ಹಾಕಿ ಸಂಸ್ಥೆಗೆ ದೂರು ನೀಡಿದ್ದು, ಹಾಕಿ ಸಂಸ್ಥೆ ನಿರ್ದೇಶಕರಿಗೆ ಭಾರತ ಹಾಕಿ ತಂಡದ ಸದಸ್ಯರು ದೂರು ಸಲ್ಲಿಕೆ ಮಾಡಿದ್ದಾರೆ. ಭಾರತದ ಗೋಲ್ ಕೀಪರ್ ಶ್ರೀಜೀಶ್ ಉದ್ದೇಶಪೂರ್ವಕವಾಗಿ ಬೇಲೆ ಅವರಿಗೆ ಅಡಚಣೆ ಮಾಡಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
Advertisement