ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಐಸಿಸಿ ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾದ ನೂತನ ಕೋಚ್ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಟೀಂ ಇಂಡಿಯಾ ನಿರ್ದೇಶಕರಾಗಿರುವ ರವಿಶಾಸ್ತ್ರಿ ಅವರೇ ಕೋಚ್ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದು, ಅವರ ಸಹಾಯಕರಾಗಿ ಸಂಜಯ್ ಬಂಗಾರ್, ಭರತ್ ಅರುಣ್ ಮತ್ತು ಆ ಶ್ರೀಧರ್ ಅವರು ಇದ್ದಾರೆ. ಕೋಚ್ ಆಯ್ಕೆ ಬಳಿಕ ರವಿಶಾಸ್ತ್ರಿ ನಿರ್ದೇಶಕರಾಗಿ ಮುಂದುವರೆಯಲಿದ್ದಾರೆ ಎಂದು ಬಿಸಿಸಿಐನ ಉನ್ನತ ಮೂಲಗಳು ತಿಳಿಸಿವೆ. ಇನ್ನು ಟೀಂ ಇಂಡಿಯಾದ ನೂತನ ಕೋಚ್ ರನ್ನು ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಅವರನ್ನೊಳಗಂಡ ಉನ್ನತ ಮಟ್ಟದ ಸಲಹಾ ಸಮಿತಿ ಆಯ್ಕೆ ಮಾಡಲಿದೆ ಎಂದು ತಿಳಿದುಬಂದಿದೆ.
ಟಿ20 ಬಳಿಕ ನಡೆಯುವ ಪ್ರತಿಯೊಂದು ಸರಣಿಗೂ ನೂತನ ಕೋಚ್ ಲಭ್ಯರಾಗಲಿದ್ದಾರೆ. ಇನ್ನು ಟೀಂ ಇಂಡಿಯಾದ ಕೋಚ್ ಸ್ಥಾನಕ್ಕೆ ಹಲವು ಹೆಸರುಗಳು ಕೇಳಿ ಬರುತ್ತಿದ್ದು, ಪ್ರಮುಖವಾಗಿ ಇತ್ತೀಚೆಗೆ ನಿವೃತ್ತಿ ಘೋಷಣೆ ಮಾಡಿದ ಆಸ್ಟ್ರೇಲಿಯಾದ ಆಟಗಾರ ಮೈಕ್ ಹಸ್ಸಿ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಈ ಬಗ್ಗೆ ಲಕ್ಷ್ಮಣ್ ಅವರನ್ನು ಭೇಟಿ ಮಾಡಿದ್ದ ಹಸ್ಸಿ ತಮ್ಮ ವೈಯುಕ್ತಿಕ ಕಾರಣಗಳಿಂದಾಗಿ ಹುದ್ದೆಯನ್ನು ನಿರಾಕರಿಸಿದ್ದರು ಎಂದು ಹೇಳಲಾಗುತ್ತಿದೆ.
ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ.
Advertisement