

2025ರ ವರ್ಷಕ್ಕೆ ಯಾವುದೇ ಕ್ರೀಡಾಪಟುವಿಗೆ ಪ್ರತಿಷ್ಠಿತ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ನೀಡದಿರಲು ಕ್ರೀಡಾ ಸಚಿವಾಲಯವು ನಿರ್ಧರಿಸಿದೆ. ಆದರೆ 17 ಕ್ರೀಡಾಪಟುಗಳನ್ನು ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಪ್ರಶಸ್ತಿಗಳಿಗೆ ಶಿಫಾರಸುಗಳನ್ನು ಆರು ತಿಂಗಳ ಹಿಂದೆ ಮಾಡಲಾಗಿತ್ತು. ಇದನ್ನು ಕ್ರೀಡಾ ಸಚಿವಾಲಯ ಮೌಲ್ಯಮಾಪನ ಮಾಡಿ ಯಾವುದೇ ಕ್ರೀಡಾಪಟುವಿಗೆ ಖೇಲ್ ರತ್ನವನ್ನು ನೀಡದಿರಲು ನಿರ್ಧರಿಸಿದೆ.
ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶ ಅರುಣ್ ಕುಮಾರ್ ಮಿಶ್ರಾ ನೇತೃತ್ವದ ಆಯ್ಕೆ ಸಮಿತಿಯು ಹಾಕಿ ತಾರೆ ಹಾರ್ದಿಕ್ ಸಿಂಗ್ ಅವರನ್ನು ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿತ್ತು. ಆದರೆ ಅವರು ಅಂತಿಮವಾಗಿ ಸ್ಪರ್ಧೆಯಿಂದ ಹೊರಗುಳಿದರು. ಈ ಹಿಂದೆ, 2014 ರಲ್ಲಿ ಖೇಲ್ ರತ್ನ ಪ್ರಶಸ್ತಿಯನ್ನು ನೀಡಲಾಗಿಲ್ಲ. ವಿಶ್ವಕಪ್ ವಿಜೇತ ಚೆಸ್ ಆಟಗಾರ್ತಿ ದಿವ್ಯಾ ದೇಶಮುಖ್, ಡೆಕಥ್ಲಾನ್ ಮತ್ತು ಹೈಜಂಪ್ ಕ್ರೀಡಾಪಟು ತೇಜಸ್ವಿನ್ ಶಂಕರ್ ಮತ್ತು ಬ್ಯಾಡ್ಮಿಂಟನ್ ಆಟಗಾರ್ತಿ ಗಾಯತ್ರಿ ಗೋಪಿಚಂದ್ ಅವರು ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನಗೊಂಡ 17 ಕ್ರೀಡಾಪಟುಗಳ ಹೆಸರು ಪಟ್ಟಿಯಲ್ಲಿದೆ.
ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಕ್ರೀಡಾಪಟುಗಳಲ್ಲಿ ಗ್ರ್ಯಾಂಡ್ಮಾಸ್ಟರ್ ವಿದಿತ್ ಗುಜರಾತಿ, ಗಾಯತ್ರಿ ಗೋಪಿಚಂದ್ ಅವರ ಮಹಿಳಾ ಡಬಲ್ಸ್ ಪಾಲುದಾರ ತ್ರಿಶಾ ಜಾಲಿ, ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ವಿಜೇತೆ ಬಾಕ್ಸರ್ ನರಿಂದರ್ ಮತ್ತು ಯುವ ಕಿವುಡ ರೈಫಲ್ ಶೂಟರ್ ಧನುಷ್ ಶ್ರೀಕಾಂತ್ ಸೇರಿದ್ದಾರೆ. 1962ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ತಂಡದ ಭಾಗವಾಗಿದ್ದ ಫುಟ್ಬಾಲ್ ಆಟಗಾರ ಐ. ಅರುಮನಾಯಗಮ್ ಅವರಿಗೆ ಜೀವಮಾನ ಸಾಧನೆಗಾಗಿ ಅರ್ಜುನ ಪ್ರಶಸ್ತಿ ನೀಡಲಾಗಿದೆ. ಈ ವರ್ಷ, ಆಯ್ಕೆ ಸಮಿತಿಯು ಅರ್ಜುನ ಪ್ರಶಸ್ತಿಗೆ 24 ಹೆಸರುಗಳನ್ನು ಶಿಫಾರಸು ಮಾಡಿತು. ಆದರೆ ಸಚಿವಾಲಯವು ಕೇವಲ 17 ಹೆಸರುಗಳನ್ನು ಅನುಮೋದಿಸಿದೆ.
ಅರ್ಜುನ ಪ್ರಶಸ್ತಿ ಪಟ್ಟಿ
* ತೇಜಸ್ವಿನ್ ಶಂಕರ್ (ಅಥ್ಲೆಟಿಕ್ಸ್)
* ಪ್ರಿಯಾಂಕಾ ಗೋಸ್ವಾಮಿ (ಅಥ್ಲೆಟಿಕ್ಸ್)
* ನರೇಂದ್ರ (ಬಾಕ್ಸಿಂಗ್)
* ವಿದಿತ್ ಗುಜರಾತಿ (ಚೆಸ್)
* ದಿವ್ಯಾ ದೇಶಮುಖ್ (ಚೆಸ್)
* ಧನುಷ್ ಶ್ರೀಕಾಂತ್ (ಕಿವುಡ ಶೂಟಿಂಗ್)
* ರಾಜ್ಕುಮಾರ್ ಪಾಲ್ (ಹಾಕಿ)
* ಸುರ್ಜಿತ್ (ಕಬಡ್ಡಿ)
* ರುದ್ರಾಂಶ್ ಖಂಡೇಲ್ವಾಲ್ (ಪ್ಯಾರಾ-ಶೂಟಿಂಗ್)
* ಏಕ್ತಾ ಭಯ್ (ಪ್ಯಾರಾ-ಅಥ್ಲೆಟಿಕ್ಸ್)
* ಅರವಿಂದ್ ಸಿಂಗ್ (ರೋಯಿಂಗ್)
* ಅಖಿಲ್ ಶೆರಾನ್ (ಶೂಟಿಂಗ್)
* ಟ್ರೀಸಾ ಜಾಲಿ (ಬ್ಯಾಡ್ಮಿಂಟನ್)
* ಗಾಯತ್ರಿ ಗೋಪಿಚಂದ್ (ಬ್ಯಾಡ್ಮಿಂಟನ್)
* ಲಾಲ್ರೆಮ್ಸಿಯಾಮಿ (ಹಾಕಿ)
* ಮೊಹಮ್ಮದ್ ಅಜ್ಮಲ್ (ಅಥ್ಲೆಟಿಕ್ಸ್)
* ಪೂಜಾ (ಕಬಡ್ಡಿ)
ಅರ್ಜುನ ಪ್ರಶಸ್ತಿ (ಜೀವಮಾನದ ಸಾಧನೆ)
* ಅರುಮೈನಾಯಗಂ (ಫುಟ್ಬಾಲ್)
ದ್ರೋಣಾಚಾರ್ಯ ಪ್ರಶಸ್ತಿ
* ಪರ್ವೀರ್ ಸಿಂಗ್
* ಛೋಟೆ ಲಾಲ್ ಯಾದವ್
* ನೇಹಾ ಚವಾಣ್
ದ್ರೋಣಾಚಾರ್ಯ ಪ್ರಶಸ್ತಿ (ಜೀವಮಾನದ ಸಾಧನೆ)
* ಧರ್ಮೇಂದ್ರ ಯಾದವ್
* ವೀರೇಂದ್ರ ಕುಮಾರ್