

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು, ತಾವು ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಲು ಮುಕ್ತರಾಗಿರುವುದಾಗಿ ಹೇಳಿದ್ದಾರೆ. ಆದರೆ ಆ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸೈನಾ ತಿಳಿಸಿದ್ದಾರೆ.
ಸದ್ಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯೆಯಾಗಿರುವ ಸೈನಾ ನೆಹ್ವಾಲ್, ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಮತ್ತು ತಮ್ಮ ಕ್ರೀಡಾ ವೃತ್ತಿಜೀವನವನ್ನು ಮೀರಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದನ್ನು ಮುಂದುವರಿಸಲು ಬಯಸುತ್ತಿರುವುದಾಗಿ ಹೇಳಿದ್ದಾರೆ.
2020 ರಲ್ಲಿ, ಸೈನಾ ನೆಹ್ವಾಲ್ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರ ಸಮ್ಮುಖದಲ್ಲಿ ಕೇಸರಿ ಪಕ್ಷ ಸೇರಿದ್ದರು.
"ನಾನು ಚುನಾವಣೆಗೆ ಸ್ಪರ್ಧಿಸಲು ಬಯಸುತ್ತೇನೆ. ಆದರೆ ಸದ್ಯಕ್ಕೆ, ನಾನು ಇನ್ನೂ ನಿರ್ಧರಿಸಿಲ್ಲ. ಖಂಡಿತವಾಗಿಯೂ, ನಾನು ಅದನ್ನು ಎದುರು ನೋಡುತ್ತಿದ್ದೇನೆ" ಎಂದು ನೆಹ್ವಾಲ್ ANI ಗೆ ತಿಳಿಸಿದ್ದಾರೆ.
"ನಾನು ದೇಶಕ್ಕಾಗಿ ಹಲವು ವರ್ಷಗಳಿಂದ ಆಡಿದ್ದೇನೆ. ಈಗ ಬಿಜೆಪಿಯಲ್ಲಿದ್ದೇನೆ. ಏಕೆಂದರೆ ನನಗೆ ಬಿಜೆಪಿ ಎಂದರೆ ತುಂಬಾ ಇಷ್ಟ. ಅವರು ದೇಶಕ್ಕಾಗಿ, ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ, ನಾನು ಅವರೊಂದಿಗೆ ನಂಟು ಹೊಂದಿದ್ದೇನೆ. ಆದ್ದರಿಂದ, ನಾನು ದೇಶಕ್ಕಾಗಿ ಉತ್ತಮವಾಗಿ ಕೆಲಸ ಮಾಡಲು ಸಹ ಬಯಸುತ್ತೇನೆ. ನಾನು ಯಾವಾಗಲೂ ದೇಶದ ಒಳಿತಿನ ಬಗ್ಗೆ ಯೋಚಿಸಿದ್ದೇನೆ" ಎಂದು ಅವರು ಹೇಳಿದ್ದಾರೆ.
ಸೈನಾ ನೆಹ್ವಾಲ್ 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಸಾಧನೆ ಮಾಡಿದ್ದರು. ಈ ಮೂಲಕ ಒಲಿಂಪಿಕ್ ಕಂಚಿನ ಪದಕ ಗೆದ್ದ ಭಾರತದ ಮೊದಲ ಬ್ಯಾಡ್ಮಿಂಟನ್ ಪಟು ಎಂಬ ದಾಖಲೆ ಬರೆದಿದ್ದರು. ಇನ್ನು 2015ರ ಜಕಾರ್ತ ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಹಾಗೂ 2017ರ ಗ್ಲಾಸ್ಗೌ ಮಹಿಳಾ ಸಿಂಗಲ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದರು.