
ನವದೆಹಲಿ: ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ ಮತ್ತು ಇತರರು ಭಾಗಿಯಾಗಿದ್ದಾರೆ ಎನ್ನಾಲಾಗಿರುವ ಕೋಲ್ ಬ್ಲಾಕ್ ಪ್ರಕರಣದ ವಾದ ವಿವಾದವನ್ನು ಆಲಿಸುತ್ತಿರುವ ವಿಶೇಷ ನ್ಯಾಯಾಲಯ, ಕಲ್ಲಿದ್ದಲು ಸಚಿವಾಲಯವನ್ನು ಹೊಂದಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುವಂತೆ ಸಿಬಿಐಗೆ ಮಂಗಳವಾರ ಸೂಚಿಸಿದೆ.
ವಿಶೇಷ ನ್ಯಾಯಾಧೀಶ ಭರತ್ ಪರಶರ್ ಈ ಸೂಚನೆ ನೀಡಿದ್ದು, ಸಿಬಿಐಗೆ ಈ ಪ್ರಕರಣದ ತನಿಖೆಯನ್ನು ಮುಂದುವರಿಸಲು ಸೂಚಿಸಿ, ಜನವರಿ ೨೭ಕ್ಕೆ ಕಲಾಪವನ್ನು ಮುಂದೂಡಿದೆ.
ಬಿರ್ಲಾ, ಮಾಜಿ ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಪಿ ಸಿ ಪಾರಖ್ ಮತ್ತಿತರನ್ನು ಕೋಲ್ ಬ್ಲಾಕ್ ಹಗರಣ, ಭ್ರಷ್ಟ್ರಾಚಾರ ಮತ್ತು ಅಪರಾಧ ಪಿತೂರಿಗಳ ಆರೋಪಗಳಿಗೆ ಅಕ್ಟೋಬರ್ ೨೦೧೩ ರಲ್ಲಿ ಸಿಬಿಐ ಆಪಾದಿತರೆಂದು ಪ್ರಕರಣ ದಾಖಲಿಸಿತ್ತು.
ಆದರೆ ಆಗಸ್ಟ್ ೨೮ ರಂದು "ತನಿಖೆಯ ವೇಳೆಯಲ್ಲಿ ಸಂಗ್ರಹಿಸಿದ ಸಾಕ್ಷ್ಯಾಧಾರಗಳು, ಎಫ್ ಐ ಆರ್ ನಲ್ಲಿ ಹೆಸರಿಸಿದವರ ವಿರುದ್ಧದ ದೋಷಾರೋಪಣೆಗಳನ್ನು ಸಮರ್ಥಿಸುವುದಿಲ್ಲ" ಎಂದು ಸಿಬಿಐ ತನಿಖೆಯ ಮುಕ್ತಾಯ ವರದಿಯನ್ನು ಸಲ್ಲಿಸಿತ್ತು.
ಈ ಮೊದಲು ಕೋರ್ಟ್, ಸಿಬಿಐ ತನಿಖೆಯನ್ನು ಯಾವ ಆಧಾರದ ಮೇಲೆ ಮುಕ್ತಾಯ ಮಾಡಿತ್ತು ಮತ್ತು ಯಾವ ರೀತಿಯ ತನಿಖೆ ನಡೆಸಿತ್ತು ಎಂಬುದ ಸ್ಪಷ್ಟೀಕರಣದ ವಿವರ ಕೇಳಿತ್ತು. ಅಲ್ಲದೆ ಬಿರ್ಲಾ ಅವರ ಹಿಂಡಾಲ್ಕೊ ಸಂಸ್ಥೆಗೆ ಕಲ್ಲಿದ್ದಲು ಬ್ಲಾಕ್ ಗಳನ್ನು ಹಂಚುವಾಗ ಪಿತೂರಿ ನಡೆದಿದೆಯೇ ಎಂಬುದರ ಸ್ಪಷ್ಟೀಕರಣವನ್ನು ಕೇಳಿತ್ತು.
Advertisement