ದೇವಮಾನವ ರಾಂಪಾಲ್ ಬಂಧನಕ್ಕೆ ಹೊಸ ಕಾರ್ಯಾಚರಣೆ: ಆಶ್ರಮ ತೊರೆದ ಸಾವಿರಾರು ಭಕ್ತರು

ಸ್ವಘೋಷಿತ ದೇವಮಾನವ ವಿವಾದಾತ್ಮಕ ಸಂತ ರಾಂಪಾಲ್ ಕೂಡಲೇ ಶರಣಾಗತನಾಗಬೇಕು ಎಂದು ಹರ್ಯಾಣ...
ದೇವಮಾನವ ರಾಂಪಾಲ್ ನ ಭಕ್ತಾದಿಗಳು
ದೇವಮಾನವ ರಾಂಪಾಲ್ ನ ಭಕ್ತಾದಿಗಳು

ಚಂಡೀಘರ್: ಸ್ವಘೋಷಿತ ದೇವಮಾನವ ವಿವಾದಾತ್ಮಕ ಸಂತ ರಾಂಪಾಲ್ ಕೂಡಲೇ ಶರಣಾಗತನಾಗಬೇಕು ಎಂದು ಹರ್ಯಾಣ ಹೈಕೋರ್ಟ್ ಮತ್ತು ಪೊಲೀಸರು ನೀಡಿರುವ ಗಡವು ಮುಗಿದಿದ್ದು, ಹರ್ಯಾಣ ಪೊಲೀಸರು ನವೀನ ಕಾರ್ಯಾಚರಣೆಗೆ ಸಿದ್ಧರಾಗಿದ್ದಾರೆ. ಬುಧವಾರವೂ ಹಿಸಾರ್ ನಲ್ಲಿ ಉದ್ವಿಘ್ನ ವಾತಾವರಣ ಮುಂದುವರೆದಿದೆ.

 ನಿನ್ನೆ ದೇವಮಾನವನ್ನು ಬಂಧಿಸಲು ನಡೆದ ವಿಫಲ ಕಾರ್ಯಾಚರಣೆಯಲ್ಲಿ ಹರ್ಯಾಣ ಪೊಲೀಸರು ರಾಂಪಾಲ್ ನ ಭಕ್ತರ ಜೊತೆ ಘರ್ಷಣೆಗಿಳಿದಿದ್ದರು. ಈ ಸಮಯದಲ್ಲಿ ವರದಿಗಾರರೂ ಸೇರಿದಂತೆ ಸುಮಾರು ೨೦೦ ಜನರು ಗಾಯಗೊಂಡಿದ್ದಾರೆ.

ಈಗ ಬರ್ವಾಲ ಪೋಲೀಸ್ ಠಾಣೆಯಲ್ಲಿ ರಾಂಪಾಲ್ ಮತ್ತು ಆತನ ಭಕ್ತರ ವಿರುದ್ಧ ಹೊಸ ಮೊಕದ್ದಮೆ ದಾಖಲಿಸಲಾಗಿದ್ದು, ಪೊಲೀಸರು ನವೀನ ಕಾರ್ಯಾಚರಣೆಗೆ ಸನ್ನದ್ಧರಾಗಿದ್ದಾರೆ.

ಆಶ್ರಮದ ಭಕ್ತರಿಗೆ ಆಶ್ರಮ ತೊರೆಯಲು ಬೆಳಗ್ಗೆ ೧೦ ಘಂಟೆಯ ಸಮಯದ ಗಡುವು ನೀಡಿದ್ದ ಪೊಲೀಸರಿಗೆ ರಾಮ್ ಪಾಲ್ ಆಶ್ರಮದಲ್ಲೇ ತಂಗಿದ್ದಾನೊ ಇಲ್ಲವೋ ಎಂಬುದರ ಬಗ್ಗೆ ಸುಳಿವಿಲ್ಲ.

ಮಂಗಳವಾರ ರಾತ್ರಿ ಸುಮಾರು ೧೦೦೦೦ ರಾಂಪಾಲ್ ಬೆಂಬಲಿಗರನ್ನು ಸತ್ಲೋಕ್ ಆಶ್ರಮದಿಂದ ತೆರವು ಮಾಡಿ, ಸರ್ಕಾರಿ ಬಸ್ಸುಗಳಲ್ಲಿ ಸುರಕ್ಷಿತವಾಗಿ ಹಿಸಾರ್ ಗೆ ಕಳುಹಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

೧೨ ಎಕರೆ ಜಾಗದಲ್ಲಿರುವ ಆಶ್ರಮವನ್ನು ೨೦೦೦೦ ಕೆಂದ್ರ ಮೀಸಲು ಪಡೆ ಮತ್ತು ಹರ್ಯಾಣ ಪೋಲೀಸರ ಶೀಘ್ರ ಕಾರ್ಯಾಚರಣೆ ಪಡೆಯ ಭದ್ರತಾ ಸಿಬ್ಬಂದಿ ಸುತ್ತುವರೆದಿದ್ದು ಯಾವ ಕ್ಷಣದಲ್ಲಾದರೂ ರಾಂಪಾಲ್ ಮೇಲೆ ಕಾರ್ಯಾಚರಣೆ ಶುರುವಾಗಬಹುದಾಗಿದೆ. ಆಶ್ರಮಕ್ಕಿದ್ದ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ಪೊಲೀಸರು ಕಡಿತಗೊಳಿಸಿದ್ದಾರೆ. 

ಈ ಮಧ್ಯೆ ರಾಂಪಾಲ್ ನ ಭಕ್ತಾದಿಗಳು, ಆಶ್ರಮದಲ್ಲಿ ೪ ಮಹಿಳೆಯರು ಮೃತಪಟ್ಟಿದ್ದಾರೆ ಎಂದು ದೂರಿದ್ದು ಪೊಲೀಸರು ಅಲ್ಲಗೆಳೆದಿದ್ದಾರೆ. "ಪೋಲೀಸ್ ಕಾರ್ಯಾಚರಣೆಯಲ್ಲಿ ಯಾವುದೇ ಸಾವು ಸಂಬಂಧಿಸಿಲ್ಲ. ೧೦೯ ಪೊಲೀಸರಿಗೆ ಗಾಯಗಳಾಗಿವೆ." ಎಂದು ಹರ್ಯಾಣ ಪೋಲೀಸ್ ಮಹಾ ನಿರ್ದೇಶಕ ಎಸ ಎನ್ ವಶಿಶ್ಠ್ ತಿಳಿಸಿದ್ದಾರೆ.

ಅಪ್ದೇಟ್: ಇಬ್ಬರ ಸಾವು -  ಈ ಘರ್ಷಣೆಯಲ್ಲಿ ಗಾಯಗೊಂಡ ಮಧ್ಯ ವಯಸ್ಕ ಮಹಿಳೆ ಮತ್ತು ೧೮ ತಿಂಗಳ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿರುವುದನ್ನು ಪೊಲೀಸರು ದೃಢೀಕರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com