ಲಂಕಾದಿಂದ ಚೆನ್ನೈಗೆ ಬಂದಿಳಿದ ಐವರು ಮೀನುಗಾರರು
ಚೆನ್ನೈ: ಡ್ರಗ್ ಕಳ್ಳಸಾಗಾಣೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ತಮಿಳುನಾಡಿನ ೫ ಜನ ಬೆಸ್ತರು, ಶ್ರೀಲಂಕಾದ ರಾಷ್ಟ್ರಾಧ್ಯಕ್ಷ ರಾಜಪಕ್ಷ ಕ್ಷಮಾದಾನ ನೀಡಿದ ಮೇಲೆ ಇಂದು ಚೆನ್ನೈಗೆ ಬಂದಿಳಿದಿದ್ದಾರೆ.
ರಾಮೇಶ್ವರದ ಈ ಮೀನುಗಾರರು, ಶ್ರೀಲಂಕಾದ ಅಧಿಕಾರಿಗಳಿಂದ ನಿನ್ನೆ ಬಿಡುಗಡೆ ಪಡೆದು, ಏರ್ ಇಂಡಿಯಾ ವಿಮಾನದಲ್ಲಿ ಬೆಳಗ್ಗೆ ೧:೦೫ ಘಂಟೆಗೆ ಚೆನ್ನೈಗೆ ಬಂದಿಳಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡಿನ ಮಂತ್ರಿಗಳಾದ ಬಿ ವಲಾರ್ಮತಿ, ಡಾ. ಎಸ್ ಸುಂದರರಾಜ್ ಮತ್ತು ಕೆ ಎ ಜಯಪಾಲ್, ಕೇಂದ್ರ ರಾಜ್ಯ ಸಚಿವರಾದ ಬಿಜೆಪಿ ಮುಖಂಡ ಪೊನ್ ರಾಧಾಕೃಷ್ಣನ್, ರಾಜ್ಯ ಬಿಜೆಪಿ ಅಧ್ಯಕ್ಷ ತಮಿಳಿಸೈ ಸೌಂದರರಾಜನ್, ಈ ಮೀನುಗಾರರನ್ನು ಬರಮಾಡಿಕೊಂಡಿದ್ದಾರೆ.
ಎಮರ್ಸನ್, ಪಿ ಅಗಸ್ಟಸ್, ಆರ್ ವಿಲ್ಸನ್, ಕೆ ಪ್ರಸಾತ್ ಮತ್ತು ಜೆ ಲಾಂಗ್ಲೆಟ್ ಈ ಐವರು ಮೀನುಗಾರು ತಮ್ಮ ಊರಿಗೆ ತೆರಳುವ ಮುಂಚೆ ಮುಖ್ಯಮತ್ರಿ ಪನ್ನೀರ್ ಸೆಲ್ವಂ ಅವರಿಂದ ಕರೆ ನಿರೀಕ್ಷಿಸಲಾಗಿದೆ ಮತ್ತು ನಾಳೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಡ್ರಗ್ ಕಳ್ಳಸಾಗಾಣೆ ಪ್ರಕರಣದಲ್ಲಿ ನವೆಂಬರ್ ೨೦೧೧ ರಲ್ಲಿ ಶ್ರೀಲಂಕಾ ಪೊಲೀಸರು ಈ ಮೀನುಗಾರರನ್ನು ಬಂಧಿಸಿ, ಕೊಲಂಬೊ ಉಚ್ಛ ನ್ಯಾಯಾಲಯ ಅಕ್ಟೋಬರ್ ೩೦ ರಂದು ಜೀವಾವಧಿ ಶಿಕ್ಷೆ ವಿಧಿಸಿತ್ತು.
ಈ ತೀರ್ಪು ತಮಿಳುನಾಡಿನಲ್ಲಿ ತೀವ್ರ ಚರ್ಚೆಗೆ ಒಳಗಾಗಿತ್ತು ಹಾಗೂ ರಾಮೇಶ್ವರದ ಸುತ್ತ ಮುತ್ತ ತೀವ್ರ ಪ್ರತಿಭಟನೆಗಳಾಗಿದ್ದವು. ತಮಿಳುನಾಡಿನ ಸರ್ಕಾರ ಈ ಪ್ರಕರಣದಲ್ಲಿ ಶ್ರೀಲಂಕಾ ಸರ್ಕಾರದ ಜೊತೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರವನ್ನು ಆಗ್ರಹಿಸಿತ್ತು.
ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕ ರಾಷ್ಟ್ರಾಧ್ಯಕ್ಷ ರಾಜಪಕ್ಷ ಅವರ ಜೊತೆ ದೂರವಾಣಿ ಕರೆಯಲ್ಲಿ ಮಾತನಾಡಿದ ನಂತರ ರಾಜಪಕ್ಷ ಮೀನುಗಾರರಿಗೆ ಕ್ಷಮಾಪಣೆ ನೀಡಿದ್ದರು.