ಪಟನಾ: ಪಟನಾದಲ್ಲಿ ಅಕ್ಟೋಬರ್ 3ರಂದು ಸಂಭವಿಸಿದ ಕಾಲ್ತುಳಿತಕ್ಕೆ ಜಿಲ್ಲಾಡಳಿತವೇ ಹೊಣೆ ಎಂದು ಬಿಹಾರ ಸರ್ಕಾರದ ತನಿಖಾ ತಂಡ ಹೇಳಿದೆ.
ಇಲ್ಲಿನ ಗಾಂಧೀ ಮೈದಾನದಲ್ಲಿ ರಾವಣವಧೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಟೀವಿ ತಂತಿಯೊಂದು ನೆಲದ ಮೇಲೆ ಬಿದ್ದಿತ್ತು. ಆ ತಂತಿಯಲ್ಲಿ ವಿದ್ಯುತ್ ಹರಿಯುತ್ತಿದೆ ಎಂಬ ವದಂತಿ ಹರಡಿದ್ದು, ಭಯಭೀತರಾದ ಜನ ಅಲ್ಲಿಂದ ಓಡಲು ಯತ್ನಿಸಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿ 33 ಜನ ಪ್ರಾಣ ಕಳೆದುಕೊಂಡಿದ್ದರು.
ಜನ ಜಂಗುಳಿಯನ್ನು ನಿಯಂತ್ರಿಸಲು ಸಾಧ್ಯವಾಗದೇ ಇರುವುದು ಮತ್ತು ಜನರಿಗೆ ಸರಿಯಾದ ಸೌಕರ್ಯಗಳನ್ನು ಕಲ್ಪಿಸದೇ ಇರುವುದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ತನಿಖಾ ಸಮಿತಿ ಹೇಳಿದೆ.
ಅಲ್ಲಿ ಸೌಕರ್ಯದ ಕೊರತೆ ಬಹಳಷ್ಟು ಇತ್ತು. ಈ ಅವ್ಯವಸ್ಥೆಗಳಿಗೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಆಡಳಿತ, ಪಟನಾ ಮುನ್ಸಿಪಲ್ ಕಾರ್ಪೋರೇಷನ್ ಮತ್ತು ಟ್ರಾಫಿಕ್ ಪೊಲೀಸ್ ಜವಾಬ್ದಾರರಾಗಿದ್ದಾರೆ ಎಂದು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಮಿರ್ ಸುಬ್ಬಾನಿ ಶನಿವಾರ ಹೇಳಿಕೆ ನೀಡಿದ್ದಾರೆ.
ಜನರು ಭಯಭೀತರಾಗಿ ಓಡುತ್ತಿದ್ದ ವೇಳೆ ಅವರನ್ನು ನಿಯಂತ್ರಿಸಲು ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ. ಜನರನ್ನು ನಿಯಂತ್ರಿಸಲು ಲೌಡ್ ಸ್ಪೀಕರ್ಗಳನ್ನು ಬಳಸಿಲ್ಲ. ಹಾಗೆಯೇ ಗಾಂಧೀಮೈದಾನದಿಂದ ಜನರು ಓಡುತ್ತಿದ್ದರೂ ಟ್ರಾಫಿಕ್ನ್ನೂ ಕೂಡಾ ನಿಯಂತ್ರಿಸಲಿಲ್ಲ ಎಂದು ಸುಬ್ಬಾನಿ ಹೇಳಿದ್ದಾರೆ.
Advertisement