ಭಾವನಗರ: ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್ನಲ್ಲಿ ಬಹುಸಂಖ್ಯಾತ ಹಿಂದೂಗಳು ವಾಸಿಸುವ ಪ್ರದೇಶಗಳನ್ನು ತೊರೆಯುವಂತೆ ವಿಶ್ವ ಹಿಂದೂ ಪರಿಷತ್ ಹಾಗೂ ಆರ್ಎಸ್ಎಸ್ ಮುಸ್ಲಿಮರ ಮೇಲೆ ಒತ್ತಡ ಹೇರುತ್ತಿವೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಹಿಂದೂಗಳ ವಸತಿ ಪ್ರದೇಶದಲ್ಲಿರುವ ಮುಸ್ಲಿಮರು ತಮ್ಮ ಮನೆ, ಆಸ್ತಿಪಾಸ್ತಿಗಳನ್ನು ಮಾರಿ ಗುಳೇ ಹೋಗುವಂತೆ ಆರ್ಎಸ್ಎಸ್ ಹಾಗೂ ವಿಶ್ವ ಹಿಂದು ಪರಿಷತ್ ಒತ್ತಡ ತಂತ್ರ ಅನುಸರಿಸುತ್ತಿವೆ ಎಂದು ಆರೋಪಿಸಲಾಗಿದೆ.
ಕಳೆದ ವರ್ಷ ಜನವರಿ 10 ರಂದು ಅಲಿ ಅಸ್ಗರ್ ಝವೇರಿ ಎಂಬ ಮುಸ್ಲಿಂ ವ್ಯಾಪಾರಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಭಾವನಗರದಲ್ಲಿ ಒಂದು ಬಂಗ್ಲೆ ಖರೀದಿಸಿದ್ದ. ಆ ಈ ಬಂಗ್ಲೆಯನ್ನು ಹಿಂದೂಗಳಿಗೆ ಮಾರಾಟ ಮಾಡುವಂತೆ ಆತನ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರು ಒತ್ತಡ ಹೇರಿದ್ದರು ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಹಿಂದೂಪರ ಸಂಘಟನೆಗಳ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಝವೇರಿ ಅವರು ತಮ್ಮ ಬಂಗ್ಲೆಯನ್ನು ಜೈನರ ಪಾಲುದಾರಿಕೆಯ ಭೂಮಿತಿ ಅಸೋಸಿಯೇಟ್ಸ್ ಎಂಬ ರಿಯಲ್ ಎಸ್ಟೇಟ್ ಕಂಪನಿಗೆ ಮಾರಾಟ ಮಾಡಿದ್ದರು. ಈಗ ಝವೇರಿ ಬಂಗ್ಲೆಯನ್ನು ನೆಲಸಮ ಮಾಡಿ, ಆ ಸ್ಥಳದಲ್ಲಿ ದೊಡ್ಡ ಅಪಾರ್ಟ್ಮೆಂಟ್ ನಿರ್ಮಿಸಿಲು ಕಂಪನಿ ಮುಂದಾಗಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಮೋದಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಗುಜರಾತ್ನಲ್ಲಿ ಹಿಂದೂಪರ ಸಂಘಟನೆಗಳು 'ಘರ್ ವಾಪ್ಸಿ' ಹೆಸರಿನಲ್ಲಿ ಅಲ್ಪ ಸಂಖ್ಯಾತರ ಮೇಲೆ ದಾಳಿ ನಡೆಸುತ್ತಿವೆ ಎಂದು ಆರೋಪಿಸಲಾಗಿದೆ.
ಝವೇರಿ ಅವರು ಕಿಶೋರ್ ಸಿನ್ಹಾ ಗೋಹಿಲ್ ಎಂಬುವವರಿಂದ ಈ ಬಂಗಲೆಯನ್ನು 49 ಲಕ್ಷ ರುಪಾಯಿಗೆ ಖರೀದಿಸಿದ್ದರು. ಈ ವೇಳೆ ಝವೇರಿ ವಿರುದ್ಧ ಹಿಂದುಗಳು ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಮುಸ್ಲಿಮರ ಆಹಾರ ಕ್ರಮದಿಂದಾಗಿ ತಮಗೆ ತೊಂದರೆಯಾಗುತ್ತದೆ ಎಂದು ವಾದಿಸಿದ್ದರು.
ಕಳೆದ ವರ್ಷ ಝವೇರಿ ಬಂಗಲೆಯನ್ನು ಖರೀದಿಸಿದ ನಂತರ ಈ ಪ್ರದೇಶದಲ್ಲಿ ರಾಮ ದರ್ಬಾರ್ ಕಾರ್ಯಕ್ರಮಕ್ಕೆ ಪ್ರವೀಣ ಭಾಯ್ ತೊಗಾಡಿಯಾ ಅವರನ್ನು ಕರೆಸಲಾಗಿತ್ತು. ರಾಮ ದರ್ಬಾರ್ನಲ್ಲಿ ಭಾಷಣ ಮಾಡಿದ್ದ ತೊಗಾಡಿಯಾ, ಮುಂದಿನ 48 ಗಂಟೆಗಳಲ್ಲಿ ಝವೇರಿ ಇಲ್ಲಿನ ತನ್ನ ಬಂಗಲೆಯನ್ನು ತೊರೆಯದಿದ್ದರೆ ಆತನ ಮೇಲೆ ದಾಳಿ ಮಾಡಿ ಎಂದು ಕಿಡಿ ಕಾರಿದ್ದರು. ತೊಗಾಡಿಯಾ ಅವರು ಈ ಕೋಮು ವೈಷಮ್ಯದ ಭಾಷಣಕ್ಕಾಗಿ ಪೊಲೀಸರು ಅವರ ವಿರುದ್ಧ ಆಗಲೇ ಕೇಸು ದಾಖಲಿಸಿಕೊಂಡಿದ್ದರು.
Advertisement