ಬೆಂಗಳೂರು: ವಿಧಾನಪರಿಷತ್ ಸದಸ್ಯರೊಬ್ಬರಿಂದ ರು.15 ಲಕ್ಷ ಸುಲಿಗೆ ಮಾಡಿದ್ದರು ಅಶ್ವಿನ್ರಾವ್? ಎಸ್ಐಟಿ ಅಧಿಕಾರಿಗಳ ಮುಂದೆ ಪ್ರಕರಣದ ಎರಡನೇ ಆರೋಪಿ ಅಶೋಕ್ ಕುಮಾರ್ ಈ ಸ್ಫೋಟಕ ಮಾಹಿತಿ ನೀಡಿದ್ದಾನೆಂದು ತಿಳಿದು ಬಂದಿದೆ.
ಅಶ್ವಿನ್ ಗ್ಯಾಂಗ್ನ ಸದಸ್ಯರು ವಿಧಾನ ಪರಿಷತ್ ಸದಸ್ಯರಿಗೆ ಬೆದರಿಕೆ ಹಾಕಿ ರು.15 ಲಕ್ಷ ವಸೂಲಿ ಮಾಡಿದ್ದರು. ಏಪ್ರಿಲ್ 21-23ನೇ ತಾರೀಖಿನ ಅವಧಿಯಲ್ಲಿ ಈ ಹಣ ವಸೂಲಿ ನಡೆದಿದೆ. ಆದರೆ ಖಚಿತವಾಗಿ ಯಾವ ದಿನ ಡೀಲ್ ನಡೆದಿದೆ ಎನ್ನುವುದು ನೆನಪಿಗೆ ಬರುತ್ತಿಲ್ಲ ಎಂದು ಆರೋಪಿ ಅಶೋಕ್ ಕುಮಾರ್ ಹೇಳಿದ್ದಾನೆ.
ಚಿಕಿತ್ಸೆಗೆಂದು ಈ ಮೂರು ದಿನ ಅಶ್ವಿನ್ ರಾವ್ ಬೆಂಗಳೂರಿಗೆ ಬಂದಿದ್ದರು. ನಗರಕ್ಕೆ ಆಗಮಿಸುವ ಮುನ್ನ ವಿಧಾನ ಪರಿಷತ್ ಸದಸ್ಯರಿಗೆ ಕರೆ ಮಾಡಿ ಅವರು ರು.25 ಲಕ್ಷ ಹಣ ನೀಡಬೇಕು. ಇಲ್ಲದಿದ್ದಲ್ಲಿ ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ಮನೆ ಮೇಲೆ ದಾಳಿ ನಡೆಸುವ ಬೆದರಿಕೆ ಹಾಕಿದ್ದರು. ಅಂತಿಮವಾಗಿ ರು.15 ಲಕ್ಷಕ್ಕೆ ಡೀಲ್ ಕುದುರಿತ್ತು. ಅದರಂತೆ ಶಾಸಕರ ಪರವಾಗಿ ಅವರ ವ್ಯಕ್ತಿ ಕ್ರೆಸೆಂಟ್ ರಸ್ತೆಯಲ್ಲಿರುವ ಲೋಕಾಯುಕ್ತರ ಅಧಿಕೃತ ನಿವಾಸದ ಆವರಣದಲ್ಲಿ ಭೇಟಿಯಾಗಿ ಸೂಟ್ಕೇಸ್ನಲ್ಲಿ ಹಣ ನೀಡಿ ಹೋಗಿದ್ದರು. ಇದಕ್ಕೆ ನಾನೇ ಸಾಕ್ಷಿ ಎಂದು ಅಶೋಕ್ ಕುಮಾರ್ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
Advertisement