ಬೆಂಗಳೂರು-ನಾಂದೇಡ್ ಎಕ್ಸ್ ಪ್ರೆಸ್ ರೈಲು ಅಪಘಾತ: ಶಾಸಕ ಸೇರಿ ಐವರ ದುರ್ಮರಣ
ಪೆನುಕೊಂಡ: ಬೆಂಗಳೂರು ನಾಂದೇಡ್ ಎಕ್ಸ್ ಪ್ರೆಸ್ ರೈಲಿಗೆ ಗ್ರಾನೈಡ್ ಕಲ್ಲು ಸಾಗಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಐದು ಮಂದಿ ಸಾವನ್ನಪ್ಪಿರುವ ಘಟನೆ ಭಾನುವಾರ ತಡರಾತ್ರಿ 2.30ಕ್ಕೆ ನಡೆದಿದೆ.
ಆಂಧ್ರಪ್ರದೇಶದ ಪೆನುಕೊಂಡ ಸಮೀಪದ ಮಡಕಶಿರ ಬಳಿ ರೈಲ್ವೆ ಕ್ರಾಸಿಂಗ್ ನಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ರಾಯಚೂರು ಜಿಲ್ಲೆಯ ದೇವದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕ ವೆಂಕಟೇಶ್ ನಾಯಕ್ ಸೇರಿದಂತೆ ಆರು ಮಂದಿ ದುರ್ಮರಣ ಹೊಂದಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಲಾರಿಯಲ್ಲಿ ಇದ್ದ ಇಬ್ಬರು ಹಾಗೂ ರೈಲಿನಲ್ಲಿ ಇದ್ದ ನಾಲ್ಕು ಪ್ರಯಾಣಿಕರು ಸಾವನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಚ್ 1 ಎಸಿಗೆ ಲಾರಿ ಡಿಕ್ಕಿ ಹೊಡೆದಿದ್ದು, ಬೋಗಿಯೊಳಗೆ ಮಲಗಿದ್ದ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ಘಟನೆ ವಿವರ: ಗ್ರಾನೈಟ್ ಕಲ್ಲು ತುಂಬಿದ್ದ ಲಾರಿ ಕಾಳಪತ್ರಿ ಕಡೆಗೆ ಹೋಗುತ್ತಿತ್ತು. ಈ ವೇಳೆ ಮಡಕಶಿರ ರೈಲ್ವೆ ಕ್ರಾಸಿಂಗ್ ಬಳಿ ಗೇಟ್ ಕ್ಲೋಸ್ ಮಾಡಲಾಗಿತ್ತು. ಆದರೆ ನಿದ್ದೆ ಗಣ್ಣಲ್ಲಿ ಚಾಲಕ ಲಾರಿ ಚಲಾಯಿಸುತ್ತಿದ್ದು, ವೇಗವಾಗಿ ಬಂದ ಲಾರಿ ರೈಲ್ವೆ ಕ್ರಾಸಿಂಗ್ ಬಳಿ ಬೆಂಗಳೂರು ನಾಂದೇಡ್ ಎಕ್ಸ್ ಪ್ರೆಸ್ ರೈಲಿನ ಎಚ್ 1ಎಸಿ ಬೋಗಿಗೆ ಡಿಕ್ಕಿ ಹೊಡೆದಿದೆ. ರೈಲಿನಲ್ಲಿ ಮಲಗಿದ್ದ ಶಾಸಕ ವೆಂಕಟೇಶ್ ನಾಯಕ್, ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಅಪಘಾತದಿಂದಾಗಿ ನಾಲ್ಕು ಬೋಗಿಗಳು ಹಳಿ ತಪ್ಪಿವೆ. ಬಿ1, ಎಚ್ 1 ಮತ್ತು ಎಸ್ 2 ಬೋಗಿ ಹಳಿ ತಪ್ಪಿವೆ.
ವೆಂಕಟೇಶ್ ನಾಯಕ್ ಅವರ ಬಗ್ಗೆ ಒಂದಿಷ್ಟು: ವೆಂಕಟೇಶ್ ನಾಯಕ್ 1936ರ ಜೂನ್ 6 ರಂದು ಜನಿಸಿದ್ದರು. 1991ರಲ್ಲಿ ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶಿಸಿದರು. 1998-99ರಲ್ಲಿ ಲೋಕಸಭೆಗೆ ಆಯ್ಕೆಯಾದರು. 2004ರಲ್ಲಿ ಮತ್ತೆ ಲೋಕಸಭೆಗೆ ಸಂಸದರಾಗಿ ಆಯ್ಕೆಯಾದರು. ಒಟ್ಟು ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಪ್ರಸ್ತುತ ದೇವದುರ್ಗದ ಶಾಸಕರಾಗಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ