ಈ ಹಿನ್ನೆಲೆಯಲ್ಲಿ ಸರ್ಕಾರ ಮಂಗಳವಾರ ಹೊಸ ಉಪ ಲೋಕಾಯುಕ್ತರ ಹೆಸರನ್ನು ಶಿಫಾರಸು ಮಾಡುವ ಸಂಬಂಧ ಸಭೆ ಕರೆದಿತ್ತು. ಸಭೆಯ ತರುವಾಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಉಪ ಲೋಕಾಯುಕ್ತ ಮಜಗೆಯವರ ಸ್ಥಾನಕ್ಕೆ ಹೊಸ ಹೆಸರನ್ನು ಶಿಫಾರಸು ಮಾಡಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಸಭೆ ನಡೆಸಿದ್ದೇವೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು ಸಭೆಗೆ ಬರಲಾಗಲಿಲ್ಲ. ಅವರು ಮೂರು ಹೆಸರನ್ನು ಪ್ರಸ್ತಾಪಿಸಿ ಪತ್ರ ಕಳಿಸಿದ್ದರು. ಮೇಲ್ಮನೆ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪನವರೂ ದೂರವಾಣಿಯಲ್ಲಿ ಮಾತನಾಡಿದರು. ಉಳಿದಂತೆ ನಾನು, ಸಭಾಪತಿ, ಸಭಾಧ್ಯಕ್ಷರು, ಪ್ರತಿಪಕ್ಷ ನಾಯಕರು ಸಭೆ ನಡೆಸಿ ತೀರ್ಮಾನ ಕೈಗೊಂಡೆವು'' ಎಂದರು. ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಆನಂದ್ ಅವರ ಹೆಸರನ್ನು ಸಭೆಯಲ್ಲಿ ಒಮ್ಮತದಿಂದ ಆಯ್ಕೆ ಮಾಡಿದ್ದೇವೆ. ಆಯ್ಕೆ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.