ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳು ಕೇಬಲ್ ತೆರವುಗೊಳಿಸುತ್ತಿರುವುದನ್ನು ಖಂಡಿಸಿ ಭಾನುವಾರ 2 ಗಂಟೆಗಳ ಕಾಲ ಕೇಬಲ್ ಸಂಪರ್ಕ ಕಡಿತಗೊಳಿಸಲು ಆಪರೇಟರ್ ಗಳು ನಿರ್ಧರಿಸಿದ್ದಾರೆ. ಕೇಬಲ್ ತೆರವು ಕಾರ್ಯಾಚರಣೆ ಮುಂದುವರಿಸಿದರೆ ರಾಜ್ಯ ವ್ಯಾಪ್ತಿ ಕೇಬಲ್ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.
ಕೇಬಲ್ ಆಪರೇಟರ್ ಗಳಿಗೆ ಬಿಬಿಎಂಪಿ ಹಲವು ಬಾರಿ ಎಚ್ಚರಿಕೆ ನೀಡಿದರು. ಅಪ್ಟಿಕಲ್ ಫೈಬರ್ ಕೇಬಲ್ (ಒಎಫ್ ಸಿ)ಗಳ ಲೆಕ್ಕ ನೀಡದ ಹಿನ್ನೆಲೆಯಲ್ಲಿ ಬುಧವಾರದಿಂದ ಪಾಲಿಕೆ ಅಧಿಕಾರಿಗಳು ಅನಧಕೃತ ಕೇಬಲ್ ತೆರವು ಕಾರ್ಯಾಚರಣೆ ಆರಂಭಿಸಿದ್ದರು. ಇದನ್ನು ಖಂಡಿಸಿದ ಆಪರೇಟರ್ ಗಳು ಶುಕ್ರವಾರ ಸಭೆ ನಡೆಸಿ, ಭಾನುವಾರ ಎರಡು ಗಂಟೆಗಳ ಕಾಲ ಕೇಬಲ್ ಸ್ಥಗಿತಗೊಳಿಸುವ ಬಗ್ಗೆ ತೀರ್ಮಾನ ಕೈಗೊಂಡರು.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಒಎಫ್ ಸಿ ಬಗ್ಗೆ ಲೆಕ್ಕ ನೀಡಿವಂತೆ ಆಪರೇಟರ್ ಗಳಿಗೆ ಸೂಚಿಸಲಾಗಿತ್ತು. ಜೊತೆಗೆ, ಬೆಂಗಳೂರು ಉಸ್ತುವಾರಿ ಸಚಿವರು ಹಾಗೂ ಬಿಬಿಎಂಪಿ ಆಯುಕ್ತರು ಮೂರು ಬಾರಿ ಗಡುವು ನೀಡಿದ್ದರು. ಕೆಲ ದಿನಗಳ ಹಿಂದೆ ಮೇಯರ್ ಬಿ.ಎಸ್.ಮಂಜುನಾಥರೆಡ್ಡಿ ಅವರು ಆಪರೇಟರ್ ಗಳಿಗೆ ಕೇಬಲ್ ಲೆಕ್ಕ ನೀಡುವಂತೆ ಡಿ.16ಕ್ಕೆ ಅಂತಿಮ ಗಡುವು ನೀಡಿದ್ದರು. ಆದರೂ, ಆಪರೇಟರ್ ಗಳು ಮೇಯರ್ ಆದೇಶ ನಿರ್ಲಕ್ಷಿಸಿದ್ದರಿಂದ ಪೂರ್ವ, ಮಹದೇವಪುರ ವಲಯದಲ್ಲಿ ಅನಧಿಕೃತ ಒಎಫ್ ಸಿ ತೆರವು ಕಾರ್ಯಾಚರಣೆ ಆರಂಭಿಸಿದ್ದರು.
ಎಂಜಿ ರಸ್ತೆ, ಹಳೇ ವಿಮಾನ ನಿಲ್ದಾಣ ರಸ್ತೆ, ಕಬ್ಬನ್ ರಸ್ತೆ, ಇನ್ ಫೆಂಟ್ರಿ ರಸ್ತೆಗಳಲ್ಲಿ ಕೇಬಲ್ ಗಳನ್ನು ಅಳವಡಿಸಲಾಗಿತ್ತು. ಈ ಕೇಬಲ್ ಗಳ ಮಾಹಿತಿಯನ್ನು ಬಿಬಿಎಂಪಿಗೆ ನೀಡಿರಲಿಲ್ಲ. ಅಲ್ಲದೆ, ಕೇಬಲ್ ಅಳವಡಿಕೆ ಶುಲ್ಕವನ್ನೂ ಪಾವತಿಸಿರಲಿಲ್ಲ. ಹೀಗಾಗಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು.
Advertisement