ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಮತಎಣಿಕೆ ಕಾರ್ಯ ಬಹುತೇಕ ಪೂರ್ಣಗೊಳ್ಳುತ್ತಿದ್ದು, ಕಾಂಗ್ರೆಸ್ ಯಾವುದೇ ಸ್ಥಾನ ಗಳಿಸದೆ ಡಕ್ ಔಟ್ ಆಗುವ ಸಾಧ್ಯತೆ ಬಹುತೇಕ ದಟ್ಟವಾಗಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪ್ರಧಾನ ಕಛೇರಿಯ ಎದುರು "ಪ್ರಿಯಾಂಕ ತನ್ನಿ" ಘೋಷಣೆಗಳು ಮತ್ತೆ ಮೊಳಗಿವೆ.
ಪಕ್ಷದ ಕಾರ್ಯಕರ್ತರ ಒಂದು ಗುಂಪು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರ ಮಗಳು ಪ್ರಿಯಾಂಕ ಗಾಂಧಿ ಅವರನ್ನು ಸಕ್ರಿಯ ರಾಜಕಾರಣಕ್ಕೆ ಕರೆತರುವಂತೆ ಘೋಷಣೆಗಳನ್ನು ಬೆಳಗಿನಿಂದ ಕೂಗುತ್ತಿದೆ.
"ಪ್ರಿಯಾಂಕಾ ಲಾವೋ ಕಾಂಗ್ರೆಸ್ ಬಚಾವೋ" (ಪ್ರಿಯಾಂಕಾ ತನ್ನಿ ಕಾಂಗ್ರೆಸ್ ಉಳಿಸಿ) ಎಂಬ ಘೋಷಣೆಗಳನ್ನೊಳಗೊಂಡ ಭಿತ್ತಿಪತ್ರಗಳು ಕಾಂಗ್ರೆಸ್ ಪ್ರಧಾನ ಕಛೇರಿಯ ಎದುರು ಸರ್ವೇಸಾಮಾನ್ಯವಾಗಿ ಕಂಡುಬರುತ್ತಿವೆ.
ಈ ಗುಂಪಿನ ನಾಯಕತ್ವ ವಹಿಸಿರುವವರು ಪಕ್ಷದ ಕಾರ್ಯಕರ್ತ ಜಗದೀಶ್ ಶರ್ಮ.
ಈ ರೀತಿಯ ಘೋಷಣೆ ಮೊಳಗುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಲೋಕಸಭೆಯ ಚುನಾವಣೆಗಳಲ್ಲಿ ಹಾಗೂ ಹರ್ಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲಿನ ದಯನೀಯ ಸೋಲಿನ ನಂತರವೂ ಈ ಕೂಗು ನಿರಂತರವಾಗಿ ಕೇಳಿ ಬಂದಿತ್ತು.
Advertisement
Advertisement