ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ಇತ್ತೀಚಿನ ಗಲಭೆಗೆ ಕಾರಣ ಕಿಡಿಗೇಡಿಗಳು ಎಂದಿರುವ ಗೃಹ ಸಚಿವ ಕೆ ಜೆ ಜಾರ್ಜ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಸ್ಥೆಯನ್ನು ನಿಷೇಧಿಸುವುದನ್ನು ಅಲ್ಲಗೆಳೆದಿದ್ದಾರೆ.
ಶುಕ್ರವಾರ ವರದಿಗಾರರೊಂದಿಗೆ ಮಾತನಾಡಿದ ಜಾರ್ಜ್, ಯಾವುದೇ ಸಂಸ್ಥೆ ಅಥವಾ ವ್ಯಕ್ತಿ ಶಿವಮೊಗ್ಗದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕಡದುವವರಿಂದ ದೂರ ಉಳಿಯುವಂತೆ ತಾಕೀತು ಮಾಡಿದ್ದಾರೆ. ಪರಿಸ್ಥಿತಿಯನ್ನು ಹದ್ದುಬಸ್ತಿ ಗೆ ತರಲು ಶ್ರಮಿಸಿದ ಪೋಲಿಸರನ್ನು ಸಚಿವ ಅಭಿನಂದಿಸಿದ್ದಾರೆ. ಯಾವುದಾದರೂ ಹಿಂದೂ ಸಂಘಟನೆಗಳು ಈ ಕೋಮು ಗಲಭೆಯ ಹಿಂದೆ ಇದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದ ಜಾರ್ಜ್ "ಪೊಲೀಸರು ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ" ಎಂದಷ್ಟೇ ಹೇಳಿದ್ದಾರೆ.
ವಿ ಎಚ್ ಪಿ ಮತ್ತು ಭಜರಂಗದಳದ ಕೈವಾಡ ಇದೆಯೇ ಎಂಬ ಪ್ರಶ್ನೆಗೆ "ಉತ್ತರ ಪ್ರಶ್ನೆಯಲ್ಲೇ ಇದೆ, ನಾನು ಇದರ ಬಗ್ಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ" ಎಂದಿದ್ದಾರೆ.
ಈ ಘಟನೆ ದುರದೃಷ್ಟಕರ ಎಂದಿರುವ ಅವರು, ಎಲ್ಲ ಸಮುದಾಯದ ಜೀವ ಮತ್ತು ಆಸ್ತಿಯನ್ನು ರಕ್ಷಿಸುವುದು ಸರ್ಕಾರ ಆದ್ಯ ಕರ್ತವ್ಯ ಎಂದಿದ್ದಾರೆ.
ಹಿಂದು ವಿರೋಧಿ ನಿಲುವನ್ನು ಕಾಂಗ್ರೆಸ್ ಸರ್ಕಾರ ಹೊಂದಿದೆ ಎಂಬ ಆರೋಪವನ್ನು ನಿರಾಕರಿಸಿರುವ ಅವರು "ನಮ್ಮ ಪಕ್ಷ ಹಿಂದು ವಿರೋಧಿ ಎಂದು ಹೇಳುವುದು ಸರಿಯಲ್ಲ. ನಮ್ಮ ಮುಖ್ಯಮಂತ್ರಿ ಮತ್ತು ಅವರ ಹಲವು ಸಹೋದ್ಯೋಗಿಗಳು ಹಿಂದುಗಳು" ಎಂದಿದ್ದಾರೆ.
Advertisement