ತಮಿಳುನಾಡು ಸರ್ಕಾರದಿಂದ 'ಅಮ್ಮ ಸಿಮೆಂಟ್'
ಚೆನ್ನೈ: ಮತ್ತೊಂದು ಜನಪ್ರಿಯ ಯೋಜನೆಯನ್ನು ಜಾರಿಗೆ ತಂದಿರುವ ತಮಿಳುನಾಡು ಸರ್ಕಾರ ಇಂದು 'ಅಮ್ಮ ಸಿಮೆಂಟ್' ಜನರಿಗೆ ಪರಿಚಯಿಸಿದೆ. ಕಟ್ಟಡ ನಿರ್ಮಾಣಕ್ಕೆ ಬೇಕಾದ ಈ ಅಗತ್ಯ ವಸ್ತುವನ್ನು ಸಹಾಯಬೆಲೆಯಲ್ಲಿ ಮಾರಲು ಸರ್ಕಾರ ಮುಂದಾಗಿದೆ.
ಎ ಐ ಡಿ ಎಂ ಕೆ ಅಧ್ಯಕ್ಷೆ ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾಗ ಕಳೆದ ವರ್ಷ ಸೆಪ್ಟಂಬರ್ ನಲ್ಲಿ ಚಾಲನೆ ನೀಡಿದ್ದ ಈ ಯೋಜನೆಯ ಪ್ರಕಾರ, ಸರ್ಕಾರ ಖಾಸಗಿ ವಲಯದಿಂದ ೨ ಲಕ್ಷ ಟನ್ ಸಿಮೆಂಟ್ ಕೊಂಡು, ಕಾರ್ಪೋರೇಷನ್, ಮುನ್ಸಿಪಾಲಿಟಿಗಳಲ್ಲಿ ಕಡಿಮೆ ಬೆಲೆಗೆ ಅಂದರೆ ಒಂದು ಚೀಲಕ್ಕೆ ೧೯೦ ರೂ ದರದಲ್ಲಿ ಮಾರಲಿದೆ ಎಂದು ತಿಳಿಸಲಾಗಿತ್ತು.
ಪಕ್ಷದ ಕಾರ್ಯಕರ್ತರು ಬೆಂಬಲಿಗರು ಜಯಲಲಿತಾ ಅವರನ್ನು 'ಅಮ್ಮ' ಎಂದು ಸಂಬೋಧಿಸುವುದು ಬಹಳ ಜನಪ್ರಿಯ. ಆಳುತ್ತಿರುವ ಎ ಐ ಡಿ ಎಂ ಕೆ ಪಕ್ಷ ಈ ಹಿಂದೆ ರೂಪಿಸಿರುವ ಅಮ್ಮ ಖನಿಜಯುಕ್ತ ನೀರು, ಅಮ್ಮ ಉಪಹಾರ ಕೇಂದ್ರಗಳು, ಅಮ್ಮ ಉಪ್ಪು ಬಹಳ ಜನಪ್ರಿಯವಾಗಿದ್ದವು.
ತಿರುಚಿರಪಳ್ಳಿಯ ಐದು ದಾಸ್ತಾನು ಕೇಂದ್ರಗಳಲ್ಲಿ ಈ ಯೋಜನೆ ಇಂದು ಜಾರಿಗೆ ಬಂದಿದ್ದು, ಇದು ಇನ್ನೂ ವಿಸ್ತರಣೆಗೊಳ್ಳಲಿದೆ. ಜನವರಿ ೧೦ರೊಳಗೆ ತಮಿಳುನಾಡಿನಾದ್ಯಂತ ೪೭೦ ಗೊಡೋನ್ ಗಳಿಗೆ ಚಾಲನೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆಯ ಅಡಿಯಲ್ಲಿ, ಫಲಾನುಭವಿಗಳು ೧೦೦ ಚದರ ಅಡಿಗೆ ೫೦ ಚೀಲ ಹಾಗೂ ೧೫೦೦ ಚದರ ಅಡಿಗೆ ೭೫೦ ಚೀಲಗಳನ್ನು, ಚೀಲವೊಂದಕ್ಕೆ ೧೯೦ ರೂ ನಂತೆ ಕೊಳ್ಳಬಹುದಾಗಿದೆ. ಇದಕ್ಕಾಗಿ ಪ್ರಾದೇಶಿಕ ಅಧಿಕಾರಿಗಳು ಪರವಾನಗಿ ನೀಡಿರುವ ಕಟ್ಟಡದ ಯೋಜನೆಯನ್ನು ಸಲ್ಲಿಸಬೇಕಾಗಿದೆ.
ಇದಲ್ಲದೆ, ಮನೆ ದುರಸ್ತಿಗಾಗಿ ೧೦ ರಿಂದ ೧೦೦ ಚೀಲ ಸಿಮೆಂಟ್ ನೀಡಲಾಗುತ್ತದೆ. ಸರ್ಕಾರದ ಸೌರ ವಿದ್ಯುತ್ ಹೊಂದಿದ ಹಸಿರು ಮನೆ ಅಭಿವೃದ್ಧಿ ಯೋಜನೆ ಹಾಗೂ ಕೇಂದ್ರ ಸರ್ಕಾರದ ಇಂದಿರಾ ಅವಾಸ್ ಯೋಜನೆಯಡಿ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ