ಕದ್ದ ಮಾಲು ಪಡೆಯಬೇಡಿ

ಕದ್ದ ಮಾಲನ್ನು ಪಡೆಯುವವರ ಮೇಲೆ ನಿಗಾ ಇಟ್ಟು ಅವರನ್ನು ಮಾಹಿತಿದಾರರನ್ನಾಗಿಸುವ ಪ್ರಯತ್ನವಾಗಿ ನಗರ ಪೊಲೀಸರು ಗಿರವಿ ಅಂಗಡಿ ಮಾಲೀಕರಿಗೆ ಸಭೆ ನಡೆಸಿ ಕಳವು ವಸ್ತುಗಳ ಪಡೆಯದಂತೆ ಸೂಚನೆ ನೀಡಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on


ಬೆಂಗಳೂರು: ಕಳ್ಳರನ್ನು ಬಂಧಿಸಿದರಷ್ಟೇ ಸಾಲದು. ಅವರಿಂದ ಮಾಲನ್ನು ಪಡೆಯುವವರ ಮೇಲೆ ನಿಗಾ ಇಟ್ಟು ಅವರನ್ನು ಮಾಹಿತಿದಾರರನ್ನಾಗಿಸುವ ಪ್ರಯತ್ನವಾಗಿ ನಗರ ಪೊಲೀಸರು ಗಿರವಿ ಅಂಗಡಿ ಮಾಲೀಕರಿಗೆ ಸಭೆ ನಡೆಸಿ ಕಳವು ವಸ್ತುಗಳ ಪಡೆಯದಂತೆ ಸೂಚನೆ ನೀಡಿದ್ದಾರೆ.

ಕಳವು ಮಾಡಿದ ವಸ್ತುಗಳನ್ನು ಪಡೆಯುವವರು ಇದ್ದರೆ ಕಳ್ಳರಿಗೆ ಕುಮ್ಮಕ್ಕು ಸಿಗುತ್ತದೆ. ಅದೇ, ಕಳವು ವಸ್ತುಗಳನ್ನು ಪಡೆಯುವವರು ಇಲ್ಲದಿದ್ದರೆ ಅಪರಾಧಗಳ ಮೇಲೆ ನಿಯಂತ್ರಣ ಹೇರಬಹುದು ಎನ್ನುವುದು ಪೊಲೀಸರ ಲೆಕ್ಕಾಚಾರ.

ಹೀಗಾಗಿ, ಪೂರ್ವ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ನೇತೃತ್ವದಲ್ಲಿ ಸಿಎಆರ್ ದಕ್ಷಿಣ ವಿಭಾಗ ಆವರಣದಲ್ಲಿರುವ ಮಂಗಳ ಕಲ್ಯಾಣ ಮಂಟಪದಲ್ಲಿ ಆಗ್ನೇಯ ವಿಭಾಗದ ಗಿರವಿ ಅಂಗಡಿಗಳ ಮಾಲೀಕರ ಸಭೆ ಕರೆದು ಚಚಿಸಲಾಯಿತು. ಸಭೆಯಲ್ಲಿ 300ಕ್ಕೂ ಅಧಿಕ ಗಿರವಿ ಅಂಗಡಿಗಳ ಮಾಲೀಕರು ಸಭೆಯಲ್ಲಿ ಭಾಗವಹಿಸಿದ್ದರು.

ಆಭರಣ ಅಡ ಇಡಲು ಬರುವವರು ಯಾರೇ ಆಗಿರಲಿ, ಅವರು ಸೂಕ್ತ ದಾಖಲಾತಿ ಒದಗಿಸದಿದ್ದಲ್ಲಿ ಯಾವುದೇ ಕಾರಣಕ್ಕೂ ಅವುಗಳನ್ನು ಗಿರವಿ ಇಟ್ಟುಕೊಳ್ಳಬಾರದು. ಸೂಕ್ತ ದಾಖಲಾತಿ ಇಲ್ಲದ ಚಿನ್ನಾಭರಣ ಇಟ್ಟುಕೊಳ್ಳುವುದು ಕಾನೂನುಬಾಹಿರ. ಅಪರಾಧಗಳ ನಿಯಂತ್ರಣಕ್ಕೆ ಪೊಲೀಸರೊಂದಿಗೆ ಕೈ ಜೋಡಿಸಬೇಕು. ಕಡ್ಡಾಯವಾಗಿ ಗಿರವಿ ಅಂಗಡಿಯಲ್ಲಿ ಉತ್ತಮ ಗುಣಮಟ್ಟದ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಯಿತು.

ಅಪರಾಧ ಕೃತ್ಯಗಳ ತಡೆಗಟ್ಟಲು ಗಿರವಿ ಅಂಗಡಿ ಮಾಲೀಕರ ಜತೆ ಸಭೆ ನಡೆಸಿರುವುದು ರಾಜ್ಯದಲ್ಲೇ ಮೊದಲು. ಮುಂದಿನ ದಿನಗಳಲ್ಲಿ ಪೂರ್ವ ಹಾಗೂ ಈಶಾನ್ಯ ವಿಭಾಗಗಳಲ್ಲೂ ಸಭೆ ನಡೆಸಿ, ಗಿರವಿದಾರರಿಗೆ ತಿಳುವಳಿಕೆ ಮೂಡಿಸಲಾಗುತ್ತದೆ.
ಪಿ.ಹರಿಶೇಖರನ್, ಹೆಚ್ಚುವರಿ ಪೊಲೀಸ್ ಆಯುಕ್ತ, ಪೂರ್ವ ವಿಭಾಗ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com