
ಬೆಂಗಳೂರು: ತಮಿಳುನಾಡು ಮುಖ್ಯಮಂತ್ರಿ ಜೆ.ಜಯ ಲಲಿತಾ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವುದಕ್ಕೆ ರಾಜ್ಯ ಸರ್ಕಾರ ಅಧಿಕೃತ ಪ್ರಕ್ರಿಯೆ ಆರಂಭಿಸಿದೆ.
ಕಾನೂನು ಮತ್ತು ಸಂಸದೀಯ ವ್ಯವಹಾರ ಇಲಾಖೆ ಈ ಬಗ್ಗೆ ಶುಕ್ರವಾರ ಅಧಿಕೃತ ಆದೇಶ ಹೊರಡಿಸಿದ್ದು, ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸುವುದಕ್ಕೆ ಸಿದ್ಧತೆ ನಡೆಸುವಂತೆ ಹಿರಿಯ ನ್ಯಾಯವಾದಿ ಜೋಸೆಫ್ ಜೆ.ಅರಿಸ್ಟಾಟಲ್ ಅವರನ್ನು ನಿಯುಕ್ತಿಗೊಳಿಸಿದೆ.
ಇದರ ಜತೆಗೆ ಮೇಲ್ಮನವಿ ಅರ್ಜಿಯಲ್ಲಿ ರಾಜ್ಯದ ಪರವಾಗಿ ವಕಾಲತ್ತು ಮಾಡಲು ಹಿರಿಯ ನ್ಯಾಯವಾದಿ ಬಿ.ವಿ.ಆಚಾರ್ಯ ಅವರನ್ನು ವಿಶೇಷ ಅಭಿಯೋಜಕರನ್ನಾಗಿ ನೇಮಕ ಮಾಡಿದೆ. ಅವರಿಗೆ ಸಹಾಯಕರಾಗಿ ಜಗದೀಶ್ ಜೆ.ಟೌಟ ಅವರನ್ನು ನೇಮಕ ಮಾಡುವುದಕ್ಕೂ ಅಧಿಕೃತ ಆದೇಶವನ್ನು ಪ್ರಕಟಿಸಲಾಗಿದೆ.
ಜಯಲಲಿತಾ ಹಾಗೂ ಅವರ ಸಹಚರರ ವಿರುದ್ಧ ಆದಾಯಕ್ಕೆ ಮೀರಿ ಆಸ್ತಿ ಸಂಗ್ರಹಿಸಿದ ಪ್ರಕರಣದ ವಿಚಾರಣೆ ರಾಜ್ಯಕ್ಕೆ ವರ್ಗಾವಣೆಗೊಂಡ ನಂತರ ತಾಂತ್ರಿಕವಾಗಿ ರಾಜ್ಯದ ಪರವಾಗಿ ಅಭಿಯೋಜಕರನ್ನು ನಿಯೋಜಿಸುವುದು ಹಾಗೂ ವಿಚಾರಣೆಗೆ ಪೂರಕವಾಗಿರುವ ಜವಾಬ್ದಾರಿ ನಿರ್ವಹಣೆ ಕರ್ನಾಟಕಕ್ಕೆ ಅನಿವಾರ್ಯವಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಜಯಲಲಿತಾ ಅವರ ವಿರುದ್ಧ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
ಈ ಆದೇಶದ ವಿರುದ್ಧ ಜಯಲಲಿತಾ ರಾಜ್ಯ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮೇ 11ರಂದು ರಾಜ್ಯ ಉಚ್ಛ ನ್ಯಾಯಾಲಯ ಜಯಲಲಿತಾ ಪರ ತೀರ್ಪು ನೀಡಿತ್ತು. ಹೀಗಾಗಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಪಾಲಿಗೆ ಬಂದಿತ್ತು. ಕಾನೂನು ಹೋರಾಟದಲ್ಲಿ ಕರ್ನಾಟಕವೇ ಎಲ್ಲ ಜವಾಬ್ದಾರಿ ನಿರ್ವಹಿಸಬೇಕೆಂದು ಈ ಹಿಂದೆಯೇ ಸುಪ್ರೀಂ ಕೋರ್ಟ್ ಸೂಚಿಸಿದ್ದರ ಜತೆಗೆ, ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್, ವಿಶೇಷ ಅಭಿಯೋಜಕರು ಮತ್ತು ಕಾನೂನು ಇಲಾಖೆ ಮೇಲ್ಮನವಿ ಸಲ್ಲಿಸುವುದು ಸೂಕ್ತ ಎಂಬ ಅಭಿಪ್ರಾಯ ನೀಡಿತ್ತು. ಇದರ ಆಧಾರದ ಮೇಲೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಜಯಲಲಿತಾ ವಿರುದ್ಧ ಮೇಲ್ಮನವಿ ಸಲ್ಲಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಈಗ ಆಡಳಿತಾತ್ಮಕ ಪ್ರಕ್ರಿಯೆಗಳೆಲ್ಲವೂ ಮುಕ್ತಾಯಗೊಂಡಿದ್ದು, ವಿಶೇಷ ಮೇಲ್ನವಿ ಅರ್ಜಿ ಸಲ್ಲಿಸುವುದಕ್ಕೆ ಸರ್ಕಾರ ಚಾಲನೆ ನೀಡಿದೆ.
Advertisement