ಖಟ್ಮಂಡು: ಮುಂಬೈ ಭಯೋತ್ಪಾದಕ ದಾಳಿಯ ನಿಯೋಜಕ ಝಾಕಿ-ಉರ್-ರಹಮಾನ್-ಲಕ್ವಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ವಿಶ್ವಸಂಸ್ಥೆಗೆ ಭಾರತ ಮಾಡಿದ್ದ ಮನವಿಗೆ ಅಡ್ಡಗಾಲು ಹಾಕಿದ ಚೈನಾ ನಡೆಯನ್ನು ಪ್ರಶ್ನಿಸಿ ಚೈನಾ ವಿದೇಶಾಂಗ ಸಚಿವ ವ್ಯಂಗ್ ಯಿ ಅವರೊಂದಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಖಟ್ಮಂಡುವಿನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ದಾನಿಗಳ ಸಮಾವೇಶದ ಜೊತೆಗೆ ಸುಷ್ಮಾ ಈ ತಕರಾರನ್ನು ಎತ್ತಿದ್ದಾರೆ.
"ವಿಶ್ವಸಂಸ್ಥೆಯ ೧೨೬೭ ಸಮಿತಿಯಲ್ಲಿ ಝಾಕಿ-ಉರ್-ರಹಮಾನ್-ಲಕ್ವಿ ಪ್ರಕರಣದ ಬಗ್ಗೆ ಚೈನಾ ನಿಲುವಿನ ಬಗ್ಗೆ ವಿದೇಶಾಂಗ ಸಚಿವೆ ತಕರಾರು ಎತ್ತಿದ್ದಾರೆ. ಲಕ್ವಿ ಸಾಮಾನ್ಯ ಭಯೋತ್ಪಾದಕನಲ್ಲ, ಅವನು ಮುಂಬೈ ಭಯೋತ್ಪಾದನ ದಾಳಿಯ ಆಯೋಜಕ. ಈ ಭಯೋತ್ಪಾದನಾ ಕೃತ್ಯದಲ್ಲಿ ಹಲವಾರು ವಿದೇಶಿ ನಿವಾಸಿಗಳು ಸೇರಿದಂತೆ ೧೬೦ ಜನರ ಸಾವನ್ನಪ್ಪಿದ್ದಾರೆ ಎಂದು ಸುಷ್ಮಾ ತಿಳಿಸಿದ್ದಾರೆ" ಎಂದು ವಿದೇಶಾಂಗ ಖಾತೆಯ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.
"ಭಾರತ ಮತ್ತು ಚೈನಾದ ನಡುವೆ ಸಾಧಿಸಲಾಗಿರುವ ದ್ವಿಪಕ್ಷೀಯ ಸಂಬಧಕ್ಕೆ ಚೈನಾದ ಈ ನಡೆ ವಿಪರೀತವಾಗಿದೆ ಅಂದು ಅವರು ಹೇಳಿದರು" ಎಂದಿದ್ದಾರೆ ಸ್ವರೂಪ್.
ಚೈನಾ ಎಲ್ಲ ರೀತಿಯ ಭಯೋತ್ಪಾದನೆಯನ್ನು ವಿರೋಧಿಸುವುದಾಗಿ ಹಾಗೂ ಭಾರತದ ಭಯೋತ್ಪಾದನಾ ವಿರೋಧಿ ಅಭಿಯಾನದಲ್ಲಿ ಕೈಜೋಡಿಸುವುದಾಗಿ ಭಾರತಕ್ಕೆ ಭರವಸೆ ನೀಡಿತ್ತು ಎಂದು ಸ್ವರೂಪ್ ತಿಳಿಸಿದ್ದಾರೆ.
"ಈ ವಿಷಯವನ್ನು ಪರಿಶೀಲಿಸುವುದಾಗಿ ಚೈನಾ ವಿದೇಶಾಂಗ ಸಚಿವ ಭರವಸೆಯಿತ್ತಿದ್ದಾರೆ" ಎಂದು ಸ್ವರೂಪ್ ತಿಳಿಸಿದ್ದಾರೆ.
Advertisement