ಲೋಕಾಯುಕ್ತ ಲಂಚ ಪ್ರಕರಣ: ಸಿಬಿಐ ತನಿಖೆ ಸೂಕ್ತ ಎಂದ ಸಂತೋಷ್ ಹೆಗಡೆ
ಮಂಡ್ಯ: ಲೋಕಾಯುಕ್ತ ಸಂಸ್ಥೆಯಲ್ಲಿ ಕೇಳಿ ಬಂದಿರುವ ಲಂಚಪ್ರಕರಣದ ತನಿಖೆಯನ್ನು ಸಿಸಿಬಿ ಬದಲು ಸಿಬಿಐಗೆ ವಹಿಸುವುದು ಸೂಕ್ತ ಎಂದು ನಿವೃತ್ತ ಲೋಕಾಯುಕ್ತ ಎನ್ . ಸಂತೋಷ್ ಹೆಗಡೆ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತರ ಮೇಲೆಯೇ ಆರೋಪ ಇರುವಾಗ ಅವರೇ ವಿಚಾರಣೆಗೆ ಒಪ್ಪಿಸುವುದು ಸರಿಯಲ್ಲ. ಪ್ರಕರಣವನ್ನು ಸರ್ಕಾರಕ್ಕೆ ಹಸ್ತಾಂತರಿಸಿ ಸಿಬಿಐಗೆ ವಹಿಸಬೇಕಿತ್ತು ಎಂದರು. ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ಇದೆ ಎಂಬ ಸಂಶಯ ಇದ್ದರೂ ಸಂಸ್ಥೆ ಮೇಲಿನ ಗೌರವ ಹೊರಟು ಹೋಗುತ್ತದೆ. ಆದ್ದರಿಂದ ಪ್ರಕರಣ ಕುರಿತು ಸೂಕ್ತವಾದ ವಿಚಾರಣೆ ಆಗಬೇಕು.
ಸರಿ ತಪ್ಪು ಯಾವುದೆಂಬುದು ಜನರಿಗೂ ಗೊತ್ತಾಗಬೇಕು.ಪ್ರಕರಣದಲ್ಲಿ ಲೋಕಾಯುಕ್ತ ಭಾಸ್ಕರರಾವ್ ಪುತ್ರ ಅಶ್ವಿನ್ ಹೆಸರು ಕೇಳಿ ಬಂದಿರುವುದು ಬೇಸರ ತಂದಿದೆ. ಅಲ್ಲದೆ ನ್ಯಾಯ ಪಾಲನೆಯ ದೃಷ್ಟಿಯಿಂದ ಹೊರಗಿನ ಸಂಸ್ಥೆಗೆ ತನಿಖೆಗೆ ನೀಡದೆ ಸ್ವಯಂ ಪ್ರೇರಿತ ತನಿಖೆಗೆ ಆದೇಶಿಸಿರುವುದರಿಂದ ಅನುಮಾನಗಳು ಮೂಡುವುದು ಸಹಜ ಎಂದರು.
ಈಗ ಆರೋಪಗಳ ಬಗ್ಗೆ ತನಿಖೆ ವಹಿಸಿರುವ ಸಿಸಿಬಿಯ ಜಂಟಿ ಆಯುಕ್ತ ಚಂದ್ರಶೇಖರ್ ಮೇಲೂ ಆರೋಪಗಳು ಕೇಳಿ ಬಂದಿವೆ. ಅವರ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆದಿದ್ದು, ವಿಚಾರಣೆ ಪ್ರಗತಿಯಲ್ಲಿದೆ. ಅಂತಹ ಅ„ಕಾರಿಯಿಂದ ವಿಚಾರಣೆ ನಡೆಸುವುದು ಸೂಕ್ತವಲ್ಲ ಎಂದರು.
ಲೋಕಾಯುಕ್ತದಲ್ಲಿ ಕೆಲಸ ಮಾಡುವವರು ಸರ್ಕಾರಿ ಅಧಿಕಾರಿಗಳೇ. ಸರ್ಕಾರದಲ್ಲಿ ಏನೆಲ್ಲಾ ಆಗುತ್ತದೆಯೋ ಇಲ್ಲಿಯೂ ನಡೆಯುತ್ತದೆ. ಅದನ್ನು ತಡೆಯುವತ್ತ ಸಂಸ್ಥೆ ಮುಖ್ಯಸ್ಥರು ಗಮನ ಹರಿಸಬೇಕು ಎಂದು ಸಲಹೆ ಮಾಡಿದರು.