ಬೆಂಗಳೂರು: ಹಳೇ ಕಾಮಗಾರಿಗೆ ಯೋಜನಾ ವರದಿ ಸಲ್ಲಿಸಿ ಹಣ ಲಪಟಾಯಿಸಲು ಯತ್ನಿಸಿದ ಆರೋಪದ ಮೇಲೆ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದು, ಬಿಬಿಎಂಪಿ ಎಂಜಿನಯರ್ ಒಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
2014-15ನೇ ಸಾಲಿನಲ್ಲಿ ನಗರಾಭಿವೃದ್ಧಿ ಯೋಜನೆ ಅನ್ವಯ ಬಿಬಿಎಂಪಿ ಎಂಜಿನಿಯರ್ ಹಾಗೂ ಅಧಿಕಾರಿಗಳು ಪೂರ್ಣವಾಗಿರುವ ಕಾಮಗಾರಿಗಳನ್ನು ನಡೆಯಬೇಕಿರುವ ಯೋಜನೆಗಳಲ್ಲಿ ಸೇರ್ಪಡೆ ಮಾಡಿದ್ದರು. ಅದರಲ್ಲಿ ಶಾಸಕ ಮುನಿರತ್ನ ಅವರ ನಿರ್ದೇಶನದಂತೆ ಯೋಜನಾ ಪಟ್ಟಿ ಸಿದ್ಧಪಡಿಸಲಾಗಿತ್ತು ಎಂದು ನಮೂದಿಸಿದ್ದರು. ಈ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು.
ಪ್ರಕರಣದಲ್ಲಿ ಶಾಸಕ ಮುನಿರತ್ನ ಅವರು 1ನೇ ಆರೋಪಿಯಾಗಿದ್ದು, ಯೋಜನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯ್ ಕುಮಾರ್ ಅವರು 2ನೇ ಆರೋಪಿಯಾಗಿದ್ದಾರೆ. ಎಫ್ಐಆರ್ನಲ್ಲಿ ಇನ್ನು ಇತರ ಆರೋಪಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸೋಮವಾರವೇ ಬಿಬಿಎಂಪಿ ಕಚೇರಿಯನ್ನು ಪರಿಶೀಲಿಸಿದ್ದರು. ಈ ವೇಳೆ ವಿಜಯ್ ಕುಮಾರ್ ಅವರಿಂದ 45 ಕೋಟಿ ಮೊತ್ತದ ಸಲ್ಲಿಕೆಯಾಗಬೇಕಿರುವ ಉದ್ದೇಶಿತ ಯೋಜನೆಗಳ ದಾಖಲೆಗಳು ಸಿಕ್ಕಿವೆ.
ಪ್ರಾಥಮಿಕ ತನಿಖೆವೇಳೆ ಉದ್ದೇಶಿತ ಕೆಲಸಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಯೋಜನೆಯಲ್ಲಿ ಶೇ.20ರಷ್ಟು ಕೆಲಸ ಮುಕ್ತಾಯಗೊಂಡಿವೆ. ಈ ಕಾಮಗಾರಿ ಮೊತ್ತ ಸುಮಾರು 8ರಿಂದ 9ಕೋಟಿ ರುಪಾಯಿ ಎಂದು ಅಂದಾಜಿಸಲಾಗಿದೆ. ಬಹುತೇಕ ಕಮಗಾರಿಗಳು ನೀರಿಗೆ ಸಂಬಂಧಿಸಿದ್ದವು ಎಂದು ಹೇಳಲಾಗಿದೆ.
ಲೋಕಾಯುಕ್ತ ಪೊಲೀಸರು ಮಂಗಳವಾರ ಎಂಜಿನಿಯರ್ ವಿಜಯ್ ಕುಮಾರ್ ಅವರನ್ನು ಬಂಧಿಸಿ, ಲೋಕಾಯುಕ್ತ ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Advertisement