ಇಂಡೋ-ಜರ್ಮನ್‌ ಶೃಂಗಸಭೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಆಹ್ವಾನವಿರಲಿಲ್ಲ!

ಇಂಡೋ-ಜರ್ಮನ್ ಶೃಂಗಸಭೆಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಧಿಕೃತವಾಗಿ ಆಹ್ವಾನ ನೀಡಿರಲಿಲ್ಲ ಎಂಬ ಸಂಗತಿ ಇದೀಗ ಬಹಿರಂಗಗೊಂಡಿದೆ...
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಬೆಂಗಳೂರು: ಇಂಡೋ-ಜರ್ಮನ್ ಶೃಂಗಸಭೆಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಧಿಕೃತವಾಗಿ ಆಹ್ವಾನ ನೀಡಿರಲಿಲ್ಲ ಎಂಬ ಸಂಗತಿ ಇದೀಗ ಬಹಿರಂಗಗೊಂಡಿದೆ.

ಪ್ರಧಾನಮಂತ್ರಿಯವರು ರಾಜ್ಯಗಳಿಗೆ ಭೇಟಿ ನೀಡಿದಾಗ ಅಲ್ಲಿನ ಮುಖ್ಯಮಂತ್ರಿಗಳ ಜತೆ ವೇದಿಕೆ ಹಂಚಿಕೊಳ್ಳುವುದು ಒಕ್ಕೂಟ ವ್ಯವಸ್ಥೆಯ ಸಂಪ್ರದಾಯ ಹಾಗೂ ಶಿಷ್ಟಾಚಾರ. ಆದರೆ ಮೋದಿ ಭೇಟಿ ವೇಳೆ ಇದರ ಉಲ್ಲಂಘನೆಯಾಗಿರುವುದು ಇದೀಗ ಹಲವು ವಿವಾದಗಳಿಗೆ ಕಾರಣವಾಗಿದೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ಇಂಡೋ-ಜರ್ಮನಿ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಹಾಗೂ ಇನ್ನಿತರೆ ಅಧಿಕಾರಿಗಳು ಭಾಗವಹಿಸಿದ್ದರು. ಆದರೆ, ಬೆಂಗಳೂರಿನಲ್ಲೇ ನಡೆದ ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತ್ರ ದೂರ ಉಳಿದಿದ್ದರು. ಆದರೆ, ಇದಕ್ಕೆ ಕಾರಣ ಮಾತ್ರ ಹೊರಬಂದಿರಲಿಲ್ಲ. ಸಿದ್ದರಾಮಯ್ಯ ಕೂಡ ಈ ಬಗ್ಗೆ ಎಲ್ಲಿಯೂ ಬಾಯಿ ಬಿಟ್ಟಿರಲಿಲ್ಲ. ಈ ವಿಷಯ ಹಲವೆಡೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಈ ಚರ್ಚೆಗಳೇ ಇದೀಗ ವಿವಾದವೊಂದಕ್ಕೆ ತಿರುಗಿದ್ದು, ಮೋದಿ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿಗೆ ಮುಂದಾಗಿದ್ದಾರೆ. ಇಂಡೋ-ಜರ್ಮನ್ ಶೃಂಗಸಭೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾಡಿದ ಅಪಮಾನ ಕುರಿತಂತೆ ಟ್ವಿಟರ್ ನಲ್ಲಿ ಕಿಡಿಕಾರಿರುವ ದಿಗ್ವಿಜಯ್ ಸಿಂಗ್ ಅವರು, ಇದೇನಾ ಮೋದಿಯವರ ಸಂಯುಕ್ತ ಸಹಕಾರಿಯೆಂದರೆ, ಒಂದೇ ಇದೇ ಶೃಂಗಸಭೆ ಗುಜರಾತ್ ನಲ್ಲಿ ನಡೆದಿದ್ದರೆ, ಅಲ್ಲಿನ ಮುಖ್ಯಮಂತ್ರಿಗೆ ಆಹ್ವಾನ ನೀಡಲಿಲ್ಲ ಎಂದಿದ್ದರೆ ಹೇಗೆ ಇರುತ್ತಿತ್ತು ಎಂದು ಪ್ರಶ್ನಿಸಿದ್ದಾರೆ.

ಇಷ್ಟಕ್ಕೂ ನಿನ್ನೆ ನಡೆದ ಶೃಂಗಸಭೆಯಲ್ಲಿ ಏನಾಯ್ತು...?
ಇಂಡೋ-ಜರ್ಮನ್ ಶೃಂಗಸಭೆ ನಿಮಿತ್ತ ಮಂಗಳವಾರ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯಪಾಲ ವಜುಬಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪಗುಚ್ಛ ನೀಡಿ ಸ್ವಾಗತಿಸಿದ್ದರು. ಪ್ರತ್ಯೇಕ ವಾಹನದಲ್ಲಿ ಪ್ರಧಾನಿ ಜತೆಗೆ ಬಾಷ್ ಕಂಪನಿಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು. ಈ ವೇಳೆ ಬಾಷ್ ಇನ್ನೋವೇಟಿವ್ ಸೆಂಟರ್‌ಗೆ ತೆರಳಲು ಸಿದ್ದರಾಮಯ್ಯ ಅವರ ಕಾರಿಗೆ ಮಾತ್ರ ಅವಕಾಶ ನೀಡಿದ ಎಸ್‌ಪಿಜಿ ಸಿಬ್ಬಂದಿ, ಸಿಎಂ ಬೆಂಗಾವಲು ಪಡೆ ವಾಹನಗಳಿಗೆ ತಡೆಯೊಡ್ಡಿದ್ದರು. ನಂತರ ಮುಖ್ಯಮಂತ್ರಿಯವರು ಈ ಕಾರ್ಯಕ್ರಮದಲ್ಲಿ ಗಣ್ಯರ ಸಾಲಿನ ಸಭಿಕರಾದರು. ಬಾಷ್‌ನ ವೊಕೇಷನಲ್ ಟ್ರೈನಿಂಗ್ ಕೇಂದ್ರಕ್ಕೆ ಮೋದಿ ಭೇಟಿ ಸಂದರ್ಭದಲ್ಲೂ ಸಿಎಂ ಜತೆಗಿರಲಿಲ್ಲ. ನಾಸ್ಕಾಮ್ ನ ಈ ನಡೆ ಇದೀಗ ಹಲವು ಟೀಕೆಗಳಿಗೆ ಗುರಿಯಾಗಿದೆ.

ಮೋದಿ ನಡೆ ವಿರುದ್ಧ ಪ್ರತಿಭಟಿಸಿದ ಸಿದ್ದರಾಮಯ್ಯ
ಇಂಡೋ-ಜರ್ಮನ್ ಶೃಂಗಸಭೆಯೊಂದು ರಾಜಧಾನಿಯ ಹೈ ಪ್ರೊಫೈಲ್ ಇವೆಂಟ್ ಇಂತಹ ಕಾರ್ಯಕ್ರಮದಲ್ಲಿ ಮೋದಿಯವರು ನನ್ನನ್ನು ತಿರಸ್ಕರಿಸಲು ಕಾರಣವೇನು. ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನ ನೀಡದ ನಾಸ್ಕಾಂ ಸಂಸ್ಥೆ ವಿರುದ್ಧ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com