ಕಲಬುರ್ಗಿ ಹತ್ಯೆ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಲಿರುವ ಕುಂ.ವೀರಭದ್ರಪ್ಪ
ಬಳ್ಳಾರಿ: ಸಂಶೋಧಕ ಡಾ.ಎಂಎಂ ಕಲಬುರ್ಗಿ ಹತ್ಯೆ ಕುರಿತಂತೆ ಸಾಹಿತ್ಯ ಅಕಾಡೆಮಿಯ ಮೌನದ ವಿರುದ್ಧ ಸಾಹಿತ್ಯವಲಯ ತಿರುಗಿಬಿದ್ದಿದ್ದು, ಇದೀಗ ಪ್ರಶಸ್ತಿ ಹಿಂದಿರುಗಿಸುವವರ ಪಟ್ಟಿಗೆ ಸಾಹಿತಿ ಕುಂ.ವೀರಭದ್ರಪ್ಪ ಸೇರಿದ್ದಾರೆ.
ಈ ಬಗ್ಗೆ ಭಾನುವಾರ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ತಮಗೆ ಲಭಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ತಿಳಿಸಿದ್ದಾರೆ. ಕೊಟ್ಟೂರಿನಲ್ಲಿ ಮಾತನಾಡಿದ ವೀರಭದ್ರಪ್ಪ ಅವರು, "2007 ರಲ್ಲಿ ಅರಮನೆ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತ್ತು. ಆದರೆ ಎಂಎಂ ಕಲಬುರ್ಗಿಗಿ ಹತ್ಯೆ ವಿಚಾರದಲ್ಲಿ ಸಾಹಿತ್ಯ ಅಕಾಡೆಮಿ ಮೌನವಾಗಿರುವುದನ್ನು ಖಂಡಿಸಿ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ. ದಾದ್ರಿ ಘಟನೆ, ಕೇಂದ್ರ ಸರ್ಕಾರದ ಧೋರಣೆಗೆ ಬೇಸತ್ತು ತಾವು ಇನ್ನೂ ಎರಡು ಮೂರು ದಿನಗಳಲ್ಲಿ ತಮ್ಮ ಪ್ರಶಸ್ತಿ ವಾಪಸ್ ನೀಡುವುದಾಗಿ ಕುಂ.ವೀರಭದ್ರಪ್ಪನವರು" ಎಂದು ಹೇಳಿದ್ದಾರೆ.
ಈ ಹಿಂದೆ ಕೇರಳದ ಜನಪ್ರಿಯ ಸಾಹಿತಿ ಸಾರಾ ಜೋಸೆಫ್ ಅವರು ದಾದ್ರಿ ಪ್ರಕರಣವನ್ನು ವಿರೋಧಿಸಿ ತಮ್ಮ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ವಾಪಸ್ ಮಾಡಿದ್ದರು. ಇನ್ನು ಕರ್ನಾಟಕದ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯೆ ಶಶಿದೇಶಪಾಂಡೆ ಅವರು ಕೂಡ ಡಾ.ಎಂಎಂ ಕಲಬುರ್ಗಿ ಹತ್ಯೆ ವಿರೋಧಿಸಿ ತಮ್ಮ ಸದಸ್ಯ ಸ್ಥಾನ ತೊರೆದಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ