ಪ್ರಶಸ್ತಿ ಹಿಂದಿರುಗಿಸದೆ ಪ್ರತಿಭಟನೆ ನಡೆಸಲು ಗೋವಾ ಸಾಹಿತಿಗಳ ನಿರ್ಧಾರ
ಪಣಜಿ: ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವ್ಯಕ್ತವಾಗುತ್ತಿರುವ ಅಸಹನೆಯ ಸಂಸ್ಕೃತಿಯನ್ನು ಖಂಡಿಸಿರುವ ಗೋವಾ ಬರಹಗಾರರು, ಪ್ರಶಸ್ತಿ ಹಿಂದಿರುಗಿಸುವುದಿಲ್ಲ ಎಂದು ಗುರುವಾರ ಹೇಳಿದ್ದಾರೆ.
ಪಣಜಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ೧೧ ಕೊಂಕಣಿ ಭಾಷೆಯ ಪ್ರಶಸ್ತಿ ವಿಜೇತರು ಈ ನಿರ್ಧಾರ ಪ್ರಕಟಿಸಿದ್ದಾರೆ.
"ಸಂಶೋಧಕ ಎಂ ಎಂ ಕಲ್ಬುರ್ಗಿ ಅವರ ಕೊಲೆಯ ಬಗ್ಗೆ ಸಾಹಿತ್ಯ ಅಕಾಡೆಮಿ ಯಾವುದೇ ಪ್ರತಿಕ್ರಿಯೆ ತೋರದೆ ಇರುವುದು ಆಘಾತವಾಗಿದೆ. ನಾವು ಪ್ರಶಸ್ತಿಯನ್ನು ಹಿಂದಿರುಗಿಸುವುದು ಬೇಡವೆಂದು ನಿರ್ಧರಿಸಿದ್ದರು ನಮ್ಮ ಭಾವನೆಗಳನ್ನು ಸಾಹಿತ್ಯ ಅಕಾಡೆಮಿಗೆ ತಿಳಿಸಲಿದ್ದೇವೆ. ಸಂಸ್ಥೆ ಆಯೋಜಿಸುವ ಸಭೆಯಲ್ಲಿ ಇದರ ಬಗ್ಗೆ ಮಾತನಾಡಬೇಕು ಎಂದು ಆಗ್ರಹಿಸುತ್ತೇವೆ" ಎಂದು ಸಾಹಿತಿ ದಾಮೋದರ್ ಮೌಜೋ ತಿಳಿಸಿದ್ದಾರೆ.
ಈ ಪತ್ರಿಕಾ ಗೋಷ್ಠಿಯಲ್ಲಿ ಪುಂಡಲೀಕ್ ನಾಯಕ್, ದಿಲೀಪ್ ಬೋರ್ಕರ್, ದತ್ತ ನಾಯಕ್, ಹೇಮಾ ನಾಯಕ್, ನಾಗೇಶ್ ಕರ್ಮಾಲಿ, ಎನ್ ಶಿವದಾಸ್ ಕೂಡ ಮಾತನಾಡಿದ್ದಾರೆ. ಇವರೆಲ್ಲರೂ ಕೊಂಕಣಿ ಸಾಹಿತ್ಯಕ್ಕೆ ಈ ಪ್ರತಿಷ್ಟಿತ ಪ್ರಶಸ್ತಿ ಪಡೆದವರು.
೪೬ ನೆ ಗೋವಾ ಅಂತರಾಷ್ಟ್ರೀಯ ಸಿನೆಮೋತ್ಸವದ ವೇಳೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಕೂಡ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ