ಬೆಂಗಳೂರು: ಮಂಡ್ಯ ಜಿಲ್ಲೆಯ ಸಣಬದಕೊಪ್ಪಲಿನ ಚೆಕ್ ವಿತರಣೆ ವಿವಾದಕ್ಕೆ ಸಂಬಂಧಿಸದಂತೆ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರು ಸ್ಪಷ್ಟನೆ ನೀಡಿದ್ದು, ನನ್ನ ರಾಜಕೀಯ ವಿರೋಧಿಗಳು ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ನನ್ನನ್ನು ತೇಜೋವಧೆ ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ವಿವಾದಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್ ಮೂಲಕ ಮಂಡ್ಯ ಜನತೆಗೆ ಸಂದೇಶ ನೀಡಿರುವ ಮಾಜಿ ಸಂಸದೆ, ಇಂತಹ ಸಂದರ್ಭದಲ್ಲಿ ನನಗೆ ಆತ್ಮಸ್ಥೈರ್ಯ ತುಂಬಿ, ನನ್ನ ಬೆನ್ನೆಲುಬಾಗಿ ನಿಂತು, ನಿಮ್ಮ ಸೇವೆಗೆ ಅವಕಾಶ ಮಾಡಿ ಕೊಟ್ಟಿರುವುದಕ್ಕೆ ಮಂಡ್ಯ ಜನತೆಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಣಬದಕೊಪ್ಪಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಭೇಟಿ ನೀಡಿದ ವೇಳೆ ನಾನು ಹಾಜರಿದ್ದು, ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿ, ಧೈರ್ಯ ತುಂಬುವ ಕೆಲಸ ಮಾಡಿದೆವು. ಅದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಒಂದು ಲಕ್ಷ ರು.ಗಳ ಚೆಕ್ಕನ್ನು ಸಂತ್ರಸ್ತ ಕುಟುಂಬಕ್ಕೆ ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಈ ವಿಷಯ ಅದೇ ದಿನ ಮಾಧ್ಯಮಗಳಲ್ಲಿ ಪ್ರಸಾರವಾಯಿತು.
ಇದಾದ ನಂತರ ಮರುದಿನ ಇದಕ್ಕೆ ಸಂಬಂಧಪಟ್ಟಂತೆ ಕೆಲ ರಾಜಕೀಯ ಮುಖಂಡರು ಇಲ್ಲ ಸಲ್ಲದ ಆರೋಪ ಮಾಡಿರುವುದು ಮಾದ್ಯಮದ ಮುಖಾಂತರ ತಿಳಿಯಿತು.ಈ ಸಂದೇಶದ ಮೂಲಕ ಸ್ಪಷ್ಟಪಡಿಸುವುದೇನೆಂದರೆ, ಆ ಚೆಕ್ಕನ್ನು ನಾನು ಹಿಂಪಡೆಯಲು ಯಾರಿಗೂ ಹೇಳಿಲ್ಲ , ರೈತರ ಭಾವನೆಗಳ ಜೊತೆ ಆಟ ಆಡುವ ವ್ಯಕ್ತಿತ್ವವು ನನ್ನದಲ್ಲ. ನನ್ನ ಕಾರ್ಯ ನಿಷ್ಠೆ , ಪ್ರಾಮಾಣಿಕತೆಯ ಪ್ರಶ್ನೆಯಾಗಿದ್ದು, ಇದು,ಮನಸ್ಸಿಗೆ ಅಗಾಧ ನೋವುಂಟು ಮಾಡಿದೆ ಎಂದಿದ್ದಾರೆ.
ಈ ವಿಷಯಕ್ಕೆ ಸಂಬಂಧ ಪಟ್ಟಂತೆ ನನಗೂ, ಮಾಧ್ಯಮಗಳಲ್ಲಿ ಪ್ರಸಾರವಾದ ವಿಷಯಕ್ಕೂ ಯಾವುದೇ ಸಂಬಂಧ ಇಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಸಹಾಯ ಮಾಡಿ ಅವರಿಗೆ ಆತ್ಮಸ್ಥೈರ್ಯ ತುಂಬುವುದು ನನ್ನ ಉದ್ದೇಶವಾಗಿತ್ತು ಅಷ್ಟೆ ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement