ನವದೆಹಲಿ: ಮಹಿಳೆಯರ ವಿರುದ್ಧ ದೌರ್ಜನ್ಯ ತಡೆಗಟ್ಟಲು ದೆಹಲಿಗೆ ಹೆಚ್ಚಿನ ತ್ವರಿತ ವಿಚಾರಣೆಯ ನ್ಯಾಯಾಲಯಗಳ ಅಗತ್ಯವಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಹೇಳಿದ್ದಾರೆ.
ಸೋಮವಾರ ದೆಹಲಿ ಸಂಪುಟ ಸಭೆಯಲ್ಲಿ ತೆಗೆದುಕೊಂದು ನಿರ್ಧಾರಗಳಲ್ಲಿ ಇದು ಒಂದಾಗಿದೆ ಎಂದು ಕೇಜ್ರಿವಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ವಿಷಯವನ್ನು ಕುರಿತು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರೊಂದಿಗೆ ಚರ್ಚಿಸಲಾಗುವುದು ಮತ್ತು ಈ ಕೋರ್ಟ್ ಗಳ ಸ್ಥಾಪನೆಗೆ ಎಲ್ಲ ಅಗತ್ಯ ನೆರವನ್ನು ಸರ್ಕಾರ ನೀಡುವುದು ಎಂದು ಅವರು ಹೇಳಿದ್ದಾರೆ.
"ತ್ವರಿತ ವಿಚಾರಣೆಯ ಕೋರ್ಟ್ ಗಳನ್ನು ಸ್ಥಾಪಿಸಲು ಸರ್ಕಾರ ಅನುದಾನ ನೀಡಲು ಸಿದ್ಧವಿದೆ" ಎಂದು ಕೂಡ ಅವರು ಹೇಳಿದ್ದಾರೆ.
ದೆಹಲಿಯಲ್ಲಿ ಮಹಿಳೆಯರ ವಿರುದ್ಧ ದೌರ್ಜನ್ಯ ಅದರಲ್ಲೂ ರೇಪ್ ಗಳ ಸಂಖ್ಯೆ ಹೆಚ್ಚುತ್ತಿರುವುದು ಏಕೆಂದರೆ ಆರೋಪಿಗಳಿಗೆ ಕಾನೂನಿನ ಬಗ್ಗೆ ಭಯವಿಲ್ಲ ಎಂದು ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಹೇಳಿದ್ದರೆ.
"ಎಲ್ಲ ಕೆಟ್ಟ ಜನರು ದೆಹಲಿಯಲ್ಲಿದ್ದಾರೆ ಅಥವಾ ಕೋಲ್ಕತ್ತ, ನ್ಯೂಯಾರ್ಕ್, ಲಂಡನ್ ಅಥವಾ ವಾರಾಣಾಸಿಯಲ್ಲಿ ನೆಲೆಸಿರುವವರೆಲ್ಲ ಸಂತರು ಎಂದಲ್ಲ. ಆದರೆ ದೆಹಲಿಯಲ್ಲಿ ಕಾನೂನಿನ ಬಗ್ಗೆ ಭಯವಿಲ್ಲ" ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಯಲ್ಲಿ ಎರಡು ದಿನಗಳ ಹಿಂದೆ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ರೇಪ್ ಹಿನ್ನಲೆಯಲ್ಲಿ, ಪೊಲೀಸ್ ವ್ಯವಸ್ಥೆಯನ್ನು ರಾಜ್ಯ ಸರ್ಕಾರದಡಿಯಲ್ಲಿ ನೀಡಲು ಕೇಂದ್ರಕ್ಕೆ ಕೇಜ್ರಿವಾಲ್ ಸವಾಲೆಸೆದಿದ್ದರು.
Advertisement