
ತಿರುವನಂತಪುರ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೇರಳದ ಕೊಲ್ಲಂನಲ್ಲಿರುವ ಪುತ್ತಿಂಗಳ್ ದೇವಾಲಯದ ಅಗ್ನಿ ಅವಘಡ ಸಂಬಂಧ ನಡೆಯುತ್ತಿರುವ ತನಿಖೆ ದಿನಕ್ಕೊಂದು ಮಹತ್ವದ ಮಾಹಿತಿಯನ್ನು ಹೊರಹಾಕುತ್ತಿದ್ದು, ಅಷ್ಟು ದೊಡ್ಡ ಕಾರ್ಯಕ್ರಮಕ್ಕೆ ದೇವಾಲಯದ ಆಡಳಿತ ಮಂಡಳಿ 1 ಕೋಟಿ ರು ಮೌಲ್ಯದ ವಿಮೆ ಮಾಡಿಸಿತ್ತು ಎಂಬ ವಿಚಾರ ಇದೀಗ ಬಹಿರಂಗವಾಗಿದೆ.
ಕೊಲ್ಲಂ ದೇವಾಲಯದಲ್ಲಿ ಕಳೆದ ವಾರ ಸಂಭವಿಸಿದ ಘೋರ ಅಗ್ನಿ ದುರಂತದಲ್ಲಿ 112 ಮಂದಿ ಸಾವಿಗೀಡಾಗಿ, 350ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಟನ್ ಗಟ್ಟಲೆ ಪಟಾಕಿ ಶೇಖರಣೆಯಾಗಿದ್ದ ಗೋದಾಮಿಗೆ ಬೆಂಕಿ ತಗುಲಿ ಅವುಗಳು ಸ್ಫೋಟಗೊಂಡ ಪರಿಣಾಮ ದೇವಾಲಯದ ಸುತ್ತಮುತ್ತಲಿನ ಸುಮಾರು 500 ಮನೆಗಳು ಬಹುತೇಕ ಹಾನಿಗೀಡಾಗಿದ್ದವು. ಇಂತಹ ಘೋರ ದುರಂತಕ್ಕೆ ಕಾರಣವಾದ ದೊಡ್ಡ ಕಾರ್ಯಕ್ರಮಕ್ಕೆ ದೇವಾಲಯದ ಆಡಳಿತ ಮಂಡಳಿ "ನ್ಯೂ ಇಂಡಿಯಾ ಅಶ್ಯೂರೆನ್ಸ್" ವಿಮಾ ಸಂಸ್ಥೆಯಿಂದ 1 ಕೋಟಿ ರು. ವಿಮೆ ಮಾಡಿಸಿತ್ತು ಎಂಬ ಮಹತ್ವದ ವಿಚಾರ ಬೆಳಕಿಗೆ ಬಂದಿದೆ.
ಇನ್ನು ಸಿಡಿಮದ್ದು ಮತ್ತು ಪಟಾಕಿ ಪ್ರದರ್ಶನಕ್ಕಾಗಿ ದೇವಾಲಯದ ಆಡಳಿತ ಮಂಡಳಿ ಸುಮಾರು 10 ಲಕ್ಷ ಮೌಲ್ಯದ 1 ಟನ್ ಗೂ ಅಧಿಕ ಪಟಾಕಿಗಳನ್ನು ಶೇಖರಣೆ ಮಾಡಿತ್ತು. ಇದಕ್ಕಾಗಿ 50 ಸಾವಿರ ಮೌಲ್ಯದ ವಿಮೆ ಮತ್ತು ಪಟಾಕಿ ಸ್ಪರ್ಧೆ ವೀಕ್ಷಿಸಲು ಆಗಮಿಸುವ ಪ್ರೇಕ್ಷಕರಿಗಾಗಿ 5ಲಕ್ಷ ಮೌಲ್ಯದ "ಸಾರ್ವಜನಿಕ ಹೊಣೆಗಾರಿಕೆ"ಯ ವಿಮೆ ಮಾಡಿಸಲಾಗಿತ್ತು ಎಂದು "ದಿ ನ್ಯೂ ಇಂಡಿಯನ್ ಎಕ್ಸೆಪ್ರೆಸ್" ಪತ್ರಿಕೆ ವರದಿ ಮಾಡಿದೆ.
"ನ್ಯೂ ಇಂಡಿಯಾ ಅಶ್ಯೂರೆನ್ಸ್" ವಿಮಾ ಸಂಸ್ಥೆಯ ವಿಮೆ ಕೇವಲ ಪಟಾಕಿಗೆ ಹಾನಿಯಾದರೆ ಅಷ್ಟೇ ಅಲ್ಲ ಪಟಾಕಿ ಪ್ರದರ್ಶನ ವೀಕ್ಷಿಸಲು ಆಗಮಿಸುವ ಜನರಿಗೆ ತೊಂದರೆಯಾದರೂ ವಿಮೆ ಅವರ ನೆರವಿಗೆ ಬರುವಂತೆ ವಿಮೆ ಮಾಡಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ದೇವಾಲಯದ ಆಡಳಿತ ಮಂಡಳಿ ಯಡವಟ್ಟು, ಪರಿಹಾರ ವಿಳಂಬ ಸಾಧ್ಯತೆ
ಆದರೆ ಅನುಮತಿ ಇಲ್ಲದೇ ದೇವಾಲಯದ ಆಡಳಿತ ಮಂಡಳಿ ಗೋದಾಮಿನಲ್ಲಿ ಟನ್ ಗಟ್ಟಲೇ ಪಟಾಕಿ ಶೇಖರಣೆ ಮಾಡಿಟ್ಟಿದ್ದರಿಂದ ಈ ವಿಮೆಯ ಹಣ ದೇವಾಲಯಕ್ಕೆ ಬರುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಇನ್ನು ದುರಂತದಲ್ಲಿ ಗಾಯಗೊಂಡ ಮಂದಿ 3 ವಿಧದಲ್ಲಿ ವಿಮೆಯ ಹಣವನ್ನು ಪಡೆಯಬಹುದಾಗಿದ್ದು, ದೇವಾಲಯದ ಆಡಳಿತ ಮಂಡಳಿ ವತಿಯಿಂದ, ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿ ಅಲ್ಲಿ ವಿಮೆ ಹಣ ಕೊಡಿಸುವಂತೆ ಮನವಿ ಮಾಡಿ ಮತ್ತು ಸರ್ಕಾರ ಘೋಷಣೆ ಮಾಡಿರುವ ಪರಿಹಾರ ಹಣ ಮುಖಾಂತರವಾಗಿ ಪರಿಹಾರ ಪಡೆಬಹುದು ಎಂದು ಖ್ಯಾತ ವಿಮಾ ತಜ್ಞ ವಿಪುಲ್ ಸೂಟಾ ತಿಳಿಸಿದ್ದಾರೆ.
Advertisement