ನವದೆಹಲಿ: ೧೯೮೪ರ ಸಿಖ್ ವಿರೋಧಿ ಗಲಭೆಯಲ್ಲಿ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ಅವರಿಗೆ ಕ್ಲೀನ್ ಚಿಟ್ ನೀಡಿರುವ ಪ್ರಕರಣದಲ್ಲಿ ತನಿಖೆ ಸಂಪೂರ್ಣಗೊಳಿಸಲು ಸಿಬಿಐಗೆ ಕೋರ್ಟ್ ಬುಧವಾರ ಎರಡು ತಿಂಗಳ ಹೆಚ್ಚುವರಿ ಅವಕಾಶ ನೀಡಿದೆ.
ಕೆನಡಾದ ಹೈ ಕಮಿಷನ್ ನಿಂದ ಮಾಹಿತಿ ಪಡೆಯಲು ಇಂಟರ್ ಪೋಲ್ ಗೆ ಮನವಿ ಸಲ್ಲಿಸಿದ್ದೇವೆ ಎಂದು ಸಿಬಿಐ ಕೋರ್ಟ್ ಗೆ ತಿಳಿಸಿದ ನಂತರ, ಅಲ್ಲಿಗೆ ಲಿಖಿತ ಅರ್ಜಿಯ ಮನವಿ ಸಲ್ಲಿಸುವಂತೆ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮೆಜೆಸ್ಟ್ರೆಟ್ ಶಿವಾಲಿ ಶರ್ಮಾ ತಿಳಿಸಿದ್ದಾರೆ.
ಜುಲೈ ೧೧ ಕ್ಕೆ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.
ಶಸ್ತ್ರಾಸ್ತ್ರ ಮಾರಾಟಗಾರ ಅಭಿಷೇಕ್ ವರ್ಮಾ ನೀಡಿದ್ದ ಹೇಳಿಕೆಯಂತೆ ಟೈಟ್ಲರ್ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ನೋಡಿದ್ದರು ಎಂಬುದನ್ನು ಗಮನಿಸಿ ಡಿಸೆಂಬರ್ ೪ ೨೦೧೫ ರಂದು ಗಲಭೆಯಲ್ಲಿ ಟೈಟ್ಲರ್ ಪಾತ್ರದ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಸಿಬಿಐಗೆ ಕೋರ್ಟ್ ಆದೇಶಿಸಿತ್ತು.
ವರ್ಮಾ ಅವರ ಹೇಳಿಕೆ ಸತ್ಯವೋ ಅಲ್ಲವೋ ಎಂಬುದನ್ನು ಕೂಡ ತನಿಖೆ ಮಾಡಲು ಕೋರ್ಟ್ ತಿಳಿಸಿತ್ತು.
ಸಾಕ್ಷ್ಯದಾರರೊಬ್ಬರಿಗೆ ಹಣದ ಆಮಿಷ ಒಡ್ಡಿ ಮತ್ತು ಅವರ ಮಗನನ್ನು ವಿದೇಶಕ್ಕೆ ಕಳುಹಿಸಿಕೊಡುವ ಭರವಸೆ ನೀಡಿ ಟೈಟ್ಲರ್ ಪ್ರಭಾವ ಬೀರಿದ್ದರು ಎಂದು ವರ್ಮಾ ಸಿಬಿಐಗೆ ಹೇಳಿಕೆ ನೀಡಿದ್ದರು.
Advertisement