ಲಘುವಾಗಿ ಪರಿಗಣಿಸಬೇಡಿ, ಅತೀ ಸೂಕ್ಷ್ಮ ಮಾಹಿತಿ ಪ್ರಸಾರ ಮಾಡಲೂ ಸಿದ್ಧ: ಭಾರತಕ್ಕೆ ಆಸಿಸ್ ಪತ್ರಕರ್ತನ ಸವಾಲು
ಸಿಡ್ನಿ: ಭಾರತ ಸರ್ಕಾರ ಹಾಗೂ ಅದರ ರಕ್ಷಣಾ ಇಲಾಖೆ ಸ್ಕಾರ್ಪಿನ್ ಜಲಾಂತರ್ಗಾಮಿ ಮಾಹಿತಿ ಸೋರಿಕೆಯನ್ನು ಲಘುವಾಗಿ ಪರಿಗಣಿಸಿದೆ. ಪ್ರಸ್ತುತ ಬಿಡುಗಡೆ ಮಾಡಿರುವ ದಾಖಲೆಗಳಿಂಗಿತಲೂ ಅತೀ ಸೂಕ್ಷ್ಮ ಮತ್ತು ಪ್ರಮುಖ ದಾಖಲೆಗಳು ಸೋರಿಕೆಯಾಗಿದ್ದು, ಅದನ್ನು ತಾವು ಪತ್ರಿಕೆಯಲ್ಲಿ ಪ್ರಸಾರ ಮಾಡಲೂ ಸಿದ್ಧ ಎಂದು ಸ್ಕಾರ್ಪಿನ್ ಮಾಹಿತಿ ಸೋರಿಕೆಯನ್ನು ವರದಿ ಮಾಡಿದ ದಿ ಆಸ್ಟ್ರೇಲಿಯಾ ಪತ್ರಿಕೆ ವರದಿಗಾರ ಹೇಳಿದ್ದಾನೆ.
ಐಎಎನ್ ಎಸ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ದಿ ಆಸ್ಟ್ರೇಲಿಯನ್ ಪತ್ರಿಕೆಯ ತನಿಖಾ ವರದಿಗಾರ ಕೆಮರಾನ್ ಸ್ಟುವರ್ಟ್, ಭಾರತೀಯ ನೌಕಾಪಡೆ ಅಧಿಕಾರಿಗಳು ಮಾಹಿತಿ ಸೋರಿಕೆ ಪ್ರಕರಣವನ್ನು ಲಘುವಾಗಿ ಪರಿಗಣಿಸಿದ್ದು, ಪ್ರಕರಣದ ಗಂಭೀರತೆ ಅವರಿಗೆ ಅರಿವಾಗುತ್ತಿಲ್ಲ. ಕೇವಲ ಡ್ಯಾಮೇಜ್ ಕಂಟ್ರೋಲ್ ಗೆ ಮಾತ್ರ ಭಾರತ ಪ್ರಯತ್ನಿಸುತ್ತಿದ್ದು, ತನ್ನ ಮಾತಿನ ಮೇಲೆ ನಂಬಿಕೆ ಇಲ್ಲವೆಂದಾದಲ್ಲಿ ತಾನು ನೌಕೆಯ ಅತೀ ಸೂಕ್ಷ್ಮ ಮಾಹಿತಿಗಳುಳ್ಳ ವರದಿಯನ್ನು ಪತ್ರಿಕೆಯಲ್ಲಿ ಪ್ರಸಾರ ಮಾಡಲು ಸಿದ್ಧ ಎಂದು ಸವಾಲು ಹಾಕಿದ್ದಾರೆ.
"ನಾನು ಪ್ರಸ್ತುತ ಸೋರಿಕೆಯಾಗಿರುವ 22,400 ಪುಟಗಳ ಮಾಹಿತಿಯನ್ನು ಪರಿಶೀಲಿಸಿದ್ದು, ಅತ್ಯಂತ ನಿರ್ಬಂಧಿತ ಹಾಗೂ ಅತೀ ಸೂಕ್ಷ್ಮ ಮಾಹಿತಿಗಳು ಕೂಡ ಇದರಲ್ಲಿವೆ. ನನ್ನ ಪ್ರಕಾರ ಇದೊಂದು ಅತ್ಯಂತ ಗಂಭೀರ ಸೋರಿಕೆಯಾಗಿದ್ದು, ಜನಗಳ ದೃಷ್ಟಿಯನ್ನು ಬೇರೆಡೆ ಸೆಳೆಯಲು ಭಾರತ ಹಾಗೂ ಫ್ರಾನ್ಸ್ ಸರ್ಕಾರಗಳು ವರದಿ ಸೋರಿಕೆ ಪ್ರಮುಖವಲ್ಲ ಎಂದು ಹೇಳುತ್ತಿವೆ. ನಮ್ಮ ಬಳಿ ಇರುವ ದಾಖಲೆಗಳು ಪ್ರಮುಖವಲ್ಲ ಎಂದು ಭಾರತ ಭಾವಿಸಿದ್ದರೆ, ಉಳಿದ ಅತೀ ಸೂಕ್ಷ್ಮ ದಾಖಲೆಗಳನ್ನು ಕೂಡ ಬಹಿರಂಗ ಪಡಿಸಲು ಸಿದ್ಧ ಎಂದು ಕೆಮರಾನ್ ಸ್ಟುವರ್ಟ್ ಹೇಳಿದ್ದಾರೆ.
ನಿನ್ನೆಯಷ್ಟೇ ಸ್ಕಾರ್ಪಿನ್ ಜಲಾಂತರ್ಗಾಮಿ ಕುರಿತ ಎರಡನೇ ಭಾಗದ ಮಾಹಿತಿ ಸೋರಿಕೆಯನ್ನು ವರದಿ ಮಾಡಿದ್ದ ದಿ ಆಸ್ಟ್ರೇಲಿಯನ್ ಪತ್ರಿಕೆ ನೌಕೆಯ ರಕ್ಷಣಾ ಸಾಮರ್ಥ್ಯಗಳ ಕುರಿತಾದ ಮಾಹಿತಿಗಳನ್ನು ಬಹಿರಂಗಗೊಳಿಸಿತ್ತು. ಭಾರತದ ಬಹು ಉದ್ದೇಶಿತ ಸ್ಕಾರ್ಪಿನ್ ಜಲಾಂತರ್ಗಾಮಿಯ ಸೋನಾರ್ ವ್ಯವಸ್ಥೆಯ ಸಂಪೂರ್ಣ ಮಾಹಿತಿಗಳು ಬಿಡುಗಡೆಯಾಗಿ, ಈ ಸೋನಾರ್ ವ್ಯವಸ್ಥೆ ಫ್ರೀಕ್ವೆನ್ಸಿ, ಯಾವ ಡಿಗ್ರಿಯಲ್ಲಿ ಅದು ಕಾರ್ಯ ನಿರ್ವಹಿಸುತ್ತದೆ ಎಂಬ ಮಾಹಿತಿಗಳು ಸೋರಿಕೆಯಾಗಿತ್ತು. ಇದಲ್ಲದೆ ನೌಕೆಯ ನಿರ್ವಹಣಾ ಕಾರ್ಯಸೂಚಿ ಕೂಡ ಸೋರಿಕೆಯಾಗಿದ್ದು, ನೌಕೆ ಹೇಗೆ ಎದುರಾಳಿ ನೌಕೆ ಸಿಡಿಸುವ ಅಸ್ತ್ರವನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತದೆ ಎಂಬ ಆಘಾತಕಾರಿ ಅಂಶ ಕೂಡ ಸೋರಿಕೆಯಾಗಿದೆ ಎಂದು ಪತ್ರಿಕೆ ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ