ಜನ್ ಧನ್ ಖಾತೆಯಲ್ಲಿರುವ ಕಪ್ಪುಹಣ ಕಾಳಧನಿಕರಿಗೆ ಕೊಡಬೇಡಿ; ಅದು ಬಡವರ ಹಣ: ಪ್ರಧಾನಿ ಮೋದಿ

ನೋಟು ನಿಷೇಧದ ಬಳಿಕ ಜನ್ ಧನ್ ಖಾತೆಗಳಲ್ಲಿ ಕಪ್ಪುಹಣ ಹಾಕುವ ಮೂಲಕ ಬಿಳಿಯಾಗಿಸುವ ಯತ್ನ ಮಾಡುತ್ತಿರುವ ಕಾಳಧನಿಕರಿಗೆ ಪ್ರಧಾನಿ ಮೋದಿ ಭರ್ಜರಿ ಶಾಕ್ ನೀಡಿದ್ದು, ಜನ್ ಧನ್ ಖಾತೆಗಳಲ್ಲಿರುವ ಕಪ್ಪುಹಣವನ್ನು ಕಾಳಧನಿಕರಿಗೆ ಹಿಂದುರುಗಿಸದಂತೆ ಕರೆ ನೀಡಿದ್ದಾರೆ.
ಪರಿವರ್ತನಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ
ಪರಿವರ್ತನಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ
Updated on

ಮೊರಾದಾಬಾದ್‌: ನೋಟು ನಿಷೇಧದ ಬಳಿಕ ಜನ್ ಧನ್ ಖಾತೆಗಳಲ್ಲಿ ಕಪ್ಪುಹಣ ಹಾಕುವ ಮೂಲಕ ಬಿಳಿಯಾಗಿಸುವ ಯತ್ನ ಮಾಡುತ್ತಿರುವ ಕಾಳಧನಿಕರಿಗೆ ಪ್ರಧಾನಿ ಮೋದಿ ಭರ್ಜರಿ ಶಾಕ್ ನೀಡಿದ್ದು, ಜನ್ ಧನ್ ಖಾತೆಗಳಲ್ಲಿರುವ  ಕಪ್ಪುಹಣವನ್ನು ಕಾಳಧನಿಕರಿಗೆ ಹಿಂದುರುಗಿಸದಂತೆ ಕರೆ ನೀಡಿದ್ದಾರೆ.

ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಆಯೋಜಿಸಿದ್ದ ಪರಿವರ್ತನಾ ರ್ಯಾಲಿಯಲ್ಲಿ ಶನಿವಾರ ಮಾತನಾಡಿದ ಅವರು, ಜನ್ ಖಾತೆ ದಾರರೇ, ನಿಮ್ಮ ಖಾತೆಯಲ್ಲಿ ಬೇರೆ ಯಾರೋ ಹಣ ಜಮಾ ಮಾಡಿದ್ದರೆ,  ಅದನ್ನು ಅವರಿಗೆ ಮರಳಿಸಬೇಡಿ. ಹಣ ಮರಳಿಸುವ ಕುರಿತು ನೀವು ಭರವಸೆ ನೀಡಿದ್ದರೂ ಪರವಾಗಿಲ್ಲ. ನಿಮ್ಮ ಖಾತೆಯಲ್ಲಿ ಅಕ್ರಮವಾಗಿ ಹಣ ಜಮೆ ಮಾಡಿದ ಎಲ್ಲ ವ್ಯಕ್ತಿಗಳನ್ನು ಜೈಲಿಗೆ ಅಟ್ಟಲು ಹಾಗೂ ಆ ಹಣವನ್ನು ನಿಮಗೇ  ನೀಡಲು ಪ್ರಬಲ ಕಾನೂನು ರೂಪಿಸುತ್ತಿದ್ದೇವೆ ಎಂದು ಹೇಳಿದರು.

"ಜನಧನ ಖಾತೆಗಳಿಗೆ ಹಣ ಜಮೆ ಮಾಡುವ ಮೂಲಕ ಶ್ರೀಮಂತರೇನು ಬಡವರಿಗೆ ನೆರವಾಗುತ್ತಿಲ್ಲ. ಇಷ್ಟು ವರ್ಷ ಅವರು ಹಣ ಲೂಟಿ ಮಾಡಿದ್ದು ಬಡವರಿಂದಲೇ. ಪ್ರಾಮಾಣಿಕ ವ್ಯಕ್ತಿಗಳು ಬ್ಯಾಂಕ್‌ಗಳಲ್ಲಿ ಹಣ ಜಮೆ ಮಾಡಲು ಕ್ಯೂ  ನಿಂತಿದ್ದರೆ, ಭ್ರಷ್ಟರು ಬಡವರ ಮನೆ ಮುಂದೆ ಸಾಲುಗಟ್ಟಿ ನಿಂತಿದ್ದಾರೆ ಎಂದು ಮೋದಿ ಲೇವಡಿ ಮಾಡಿದರು.

ಇದೇ ವೇಳೆ ನೋಟು ನಿಷೇಧ ಕ್ರಮವನ್ನು ಖಂಡಿಸುತ್ತಿರುವ ಪ್ರತಿಪಕ್ಷಗಳ ಟೀಕೆಗೆ ಉತ್ತರಿಸಿದ ಪ್ರಧಾನಿ ಮೋದಿ. "ಬ್ಯಾಂಕ್‌ಗಳ ಮುಂದೆ ಗಂಟೆಗಟ್ಟಲೆ ಕ್ಯೂ ನಿಂತಿರುವ ಜನರಿಗೆ ಧನ್ಯವಾದ ಸಲ್ಲಿಸುತ್ತೇನೆ. ಈ ಬಗ್ಗೆ ಕಣ್ಣೀರು  ಸುರಿಸುತ್ತಿರುವ ರಾಜಕಾರಣಿಗಳಿಗೆ ನನ್ನಿಂದ ಕೆಲವು ಪ್ರಶ್ನೆಗಳಿವೆ. ಸ್ವಾತಂತ್ರ್ಯ ಬಂದ 70 ವರ್ಷಗಳ ಕಾಲ ನೀವು ಇಡೀ ದೇಶವನ್ನು ಸರತಿ ಸಾಲಿನಲ್ಲಿ ನಿಲ್ಲಿಸಿದಿರಿ. ಸಕ್ಕರೆ, ಸೀಮೆ ಎಣ್ಣೆ ಹಾಗೂ ಗೋಧಿಗಾಗಿ ಜನರು ಹಿಂದೆ ಸಾಲಿನಲ್ಲಿ  ನಿಲ್ಲಬೇಕಾಗಿತ್ತು. ಅಂತಹ ಎಲ್ಲ ಸಾಲುಗಳನ್ನೂ ಕೊನೆಗಾಣಿಸುವ ಕೊನೆಯ ಸಾಲು ಈಗಿನದ್ದು. ಭ್ರಷ್ಟಾಚಾರದ ವಿರುದ್ಧ ಸಮರ ಸಾರುವ ಮೂಲಕ  ಪಾಪ ಮಾಡಿದ್ದೇನೆ ಎಂಬಂತೆ ನನ್ನ ಮೇಲೆ ಪ್ರತಿಪಕ್ಷಗಳು ವಾಗ್ದಾಳಿ ಮಾಡುತ್ತಿವೆ.  ನಾನೊಬ್ಬ ಫ‌ಕೀರ. ಜೋಳಿಗೆ ಹಿಡಿದು ಹೊರಟುಬಿಡಬಲ್ಲೆ. ಜನರೇ ನನ್ನ ನಾಯಕರು. ನನಗೆ ಹೈಕಮಾಂಡ್‌ ಇಲ್ಲ, ಜನರೇ ನನ್ನ ಹೈಕಮಾಂಡ್" ಎಂದು ಮೋದಿ ಹೇಳಿದರು.

ದೇಶದ ಪ್ರತಿಯೊಬ್ಬ ನಾಗರೀಕನಿಗೂ ಬ್ಯಾಂಕಿಂಗ್ ಸೇವೆ ಲಭ್ಯವಾಗಬೇಕು ಎಂಬ ಆಶಯದೊಂದಿಗೆ ಪ್ರಧಾನಿ ಮೋದಿ ಅವರು 2014ರ ಆಗಸ್ಟ್‌ನಲ್ಲಿ ಜನ್ ಧನ್ ಯೋಜನೆ ಆರಂಭಿಸಿದರು.  ಈ ಖಾತೆಗಳಲ್ಲಿ 50 ಸಾವಿರ ರು. ವರೆಗೆ  ಠೇವಣಿ ಇಡಬಹುದಿತ್ತು. ಆದರೆ ಪ್ರಧಾನಿ ಮೋದಿ ನವೆಂಬರ್ 8ರಂದು ನೋಟು ನಿಷೇಧ ನಿರ್ಧಾರ ಪ್ರಕಟಿಸಿದ ಬಳಿಕ ಜನ್ ಧನ್ ಖಾತೆಗಳಿಗೆ ಅಪಾರ ಹಣ ಹರಿದು ಬರಲಾರಂಭಿಸಿದೆ. ಕಾಳಧನಿಕರು ತಮ್ಮ ಕಪ್ಪು ಹಣವನ್ನು ಬಡವರ  ಜನ್ ಧನ್ ಖಾತೆಗಳಿಗೆ ಜಮೆ ಮಾಡುತ್ತಿರುವ ವರದಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೋದಿ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com