ನವದೆಹಲಿ: ಕೇಂದ್ರ ಸರ್ಕಾರದ ಇಬ್ಬರು ಸಚಿವರು ವಿವಿಧ ಕಾರ್ಯಗಳಿಗೆ ಬಿಡುಗಡೆ ಮಾಡಿದ್ದ ಸುಮಾರು 26 ಸಾವಿರ ಕೋಟಿ ರು. ಅನುದಾನಕ್ಕೆ ಫಲಾನುಭವಿಗಳ ಪತ್ತೆಯೇ ಇಲ್ಲ ಎಂದು ಭಾರತದ ಮಹಾಲೇಖಪಾಲ(ಸಿಎಜಿ)ರು ಮಾಹಿತಿ ಹೊರಹಾಕಿದ್ದಾರೆ.
ಕಳೆದ ಮೂರು ವರ್ಷದಲ್ಲಿ ಈ 26 ಸಾವಿರ ಕೋಟಿ ರು. ಅನುದಾನ ಬಿಡುಗಡೆಯಾಗಿದ್ದು, ಈ ಅನುದಾನಕ್ಕೆ ಕೇಂದ್ರದ ಯಾವುದೇ ಸಚಿವಾಲಯದ ಅನುಮೋದನೆ ದೊರೆತಿಲ್ಲವಂತೆ. ಅಂತೆಯೇ ದಾಖಲೆಗಳಲ್ಲಿ ಅನುದಾನ ಸ್ವೀಕರಿಸಿದ ಫಲಾನುಭವಿ ಇಲಾಖೆ, ವ್ಯಕ್ತಿ, ಸಂಸ್ಥೆಗಳ ದಾಖಲೇ ಇಲ್ಲ ಎಂದು ಸಿಎಜಿ ಹೇಳಿದೆ. ಸಿಎಜಿ ಪತ್ತೆ ಮಾಡಿರುವಂತೆ ಈ ಸಾವಿರಾರು ಕೋಟಿ ಹಣಕ್ಕೆ ಯಾವುದೇ ಸಚಿವಾಲಯ ಸಹಿ ಮಾಡಿಲ್ಲ. ಹೀಗಾಗಿ ಇದು ನಿಯಮ ಬಾಹಿರವಾಗಿ ಬಿಡುಗಡೆಯಾದ ಅನುದಾನವಾಗಿರಬಹುದು. ಅಥವಾ ಅಕ್ರಮವಾಗಿ ತೆಗೆದುಕೊಂಡಿರಬಹುದಾದ ಅನುದಾನವಾಗಿರಬಹುದು ಎಂದು ಸಿಎಜಿ ಅಭಿಪ್ರಾಯಪಟ್ಟಿದೆ.
ಕೆಲ ಅನುದಾನಗಳನ್ನು ಬಂಡವಾಳ ಸೃಷ್ಟಿಗೆ ಬಳಸಿಕೊಳ್ಳಲಾಗುತ್ತದೆ. ಇಂತಹ ಕೆಲ ಅನುದಾನಗಳು ನಿಗದಿತ ಫಲಾನಭುವಿಗಳನ್ನು ತಲುಪಿದೆಯಾದರೂ, ಉಳಿದಂತೆ ಬಿಡುಗಡೆಯಾದ ಅನುದಾನಗಳ ಪೈಕಿ ಕೆಲ ಅನುದಾನಗಳ ಫಲಾನುಭವಿಗಳೇ ಪತ್ತೆ ಇಲ್ಲ. ಹೀಗಾಗಿ ಈ ಅನುದಾನ ಭ್ರಷ್ಟರ ಮತ್ತು ನಕಲಿ ಗುತ್ತಿಗೆದಾರರ ಪಾಲಿಗಿರಬಹುದು ಎಂದು ಸಿಎಜಿ ಹೇಳಿದೆ. ಪ್ರತೀ ವರ್ಷ ನಡೆಸುವಂತೆ ಈ ವರ್ಷವೂ ಸಿಎಜಿ ವಿತ್ತ ಇಲಾಖೆಯ ದಾಖಲೆಗಳನ್ನು ಪರಿಶೀಲಿಸಿದ್ದು, ಈ ವೇಳೆ ಈ ಮಾಹಿತಿ ಹೊರಬಿದ್ದಿದೆ.
2014 ಮತ್ತು 2016ರ ಹಣಕಾಸಿನ ವರ್ಷದಲ್ಲಿ ವಿತ್ತ ಸಚಿವಾಲಯ ಕೋಟಿಗಟ್ಟಲೆ ಲೆಕ್ಕದಲ್ಲಿ ಅನುದಾನ ಬಿಡುಗಡೆ ಮಾಡಿದೆ. ಆದರೆ ಈ ಅನುದಾನದ ಫಲಾನುಭವಿಗಳು ದಾಖಲೆಗಳು ಮಾತ್ರ ಪತ್ತೆಯಾಗಿಲ್ಲ. ಈ ಅನುದಾನಗಳು ಯಾವ ಉದ್ದೇಶಕ್ಕಾಗಿ, ಯಾರಿಗೆ, ಯಾವ ಯೋಜನೆಯಡಿಯಲ್ಲಿ ಬಿಡುಗಡೆಯಾಗಿದೆ ಎಂಬ ಅಂಶವೂ ದಾಖಲೆಗಳಲ್ಲಿ ಲಭ್ಯವಿಲ್ಲ ಎಂದು ಸಿಎಜಿ ಹೇಳಿದೆ. ಅಂತೆಯೇ 5 ಸಾವಿರ ಕೋಟಿಗಿಂತಲೂ ಅಧಿಕ ಅನುದಾನ ಬಿಡುಗಡೆಗೆ ಕೇಂದ್ರ ಸಚಿವಾಲಯದ ಅನುಮೋದನೆ ಕಡ್ಡಾಯ ಎಂಬ ನಿಯಮವಿದ್ದರೂ, ಸಚಿವಾಲಯದ ಅನುಮೋದನೆ ಇಲ್ಲದೇ ಇಷ್ಟು ಭಾರಿ ಪ್ರಮಾಣದ ಅನುದಾನ ಬಿಡುಗಡೆಯಾಗಿದ್ದಾದರೂ ಹೇಗೆ ಎಂಬ ಅಂಶವನ್ನು ಸಿಎಜಿ ತನಿಖೆ ನಡೆಸುತ್ತಿದೆ.
Advertisement