ನವದೆಹಲಿ: ಬೇಸಿಗೆಗೆ ಮುನ್ನವೇ ವಿದ್ಯುತ್ ಅಭಾವದಿಂದ ಕಂಗೆಟ್ಟಿರುವ ಕರ್ನಾಟಕಕ್ಕೆ 319 ಮೆಗಾವ್ಯಾಟ್ ವಿದ್ಯುತ್ ನೀಡಲು ಕೇಂದ್ರ ಸರ್ಕಾರ ಶುಕ್ರವಾರ ಒಪ್ಪಿಗೆ ನೀಡಿದೆ.
ಕೇಂದ್ರ ಸಚಿವ ಅನಂತ ಕುಮಾರ್ ನೇತೃತ್ವದಲ್ಲಿ ಇಂದು ದೆಹಲಿ ಪ್ರಯಾಣ ಬೆಳೆಸಿದ್ದ ನಿಯೋಗ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಕುರಿತು ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯಲ್ರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿತ್ತು. ಈ ಪ್ರಯತ್ನದ ಫಲವೇನೋ ಎಂಬಂತ ಇದೀಗ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ವಿದ್ಯುತ್ ನೀಡಲು ಒಪ್ಪಿಗೆ ಸೂಚಿಸಿದೆ.
ಪ್ರಸ್ತುತ ಕರ್ನಾಟಕದಲ್ಲಿ ರೈತರಿಗೆ ದಿನವೊಂದಕ್ಕೆ ಕೇವಲ 3 ಗಂಟೆ ಮಾತ್ರ ವಿದ್ಯುತ್ ದೊರೆಯುತ್ತಿದ್ದು, ಮಳೆಯ ಅಭಾವ ವಿದ್ಯುತ್ ಉತ್ಪಾದನೆಯಲ್ಲಿ ತೊಡಕಾಗಿರುವ ಕುರಿತು ಸಚಿವರೊಂದಿಗೆ ನಿಯೋಗ ಚರ್ಚಿಸಿತು. ರಾಜ್ಯ ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವ ಗೊಯಲ್ ಅವರು, ದೇಶದಲ್ಲಿ ಸಂಪನ್ಮೂಲಗಳಿಗೆ ಕೊರತೆ ಇಲ್ಲ. ಹೀಗಾಗಿ ಕರ್ನಾಟಕಕ್ಕೆ ಸದ್ಯ 319 ಮೆಗಾ ವ್ಯಾಟ್ ವಿದ್ಯುತ್ ನೀಡುವುದಾಗಿ ಮತ್ತು ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಅರಿತು ಹೆಚ್ಚಿನ ಸೌಲಭ್ಯ ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಕೇಂದ್ರ ಸಚಿವ ಅನಂತ ಕುಮಾರ್ ನೇತೃತ್ವದ ನಿಯೋಗದಲ್ಲಿ ಕೇಂದ್ರ ಕಾನೂನು ಸಚಿವ ಡಿ. ವಿ. ಸದಾನಂದಗೌಡ ಹಾಗೂ ಲೋಕಸಭಾ ಸದಸ್ಯ ಪ್ರಹ್ಲಾದ್ ಜೋಶಿ ಕೂಡ ಇದ್ದರು.
Advertisement