ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಉದ್ವಿಗ್ನ: ಸಂಕಷ್ಟದಲ್ಲಿ ರಾಜ್ಯದ 200 ಅಮರನಾಥ ಯಾತ್ರಾರ್ಥಿಗಳು

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ನಡೆಸುತ್ತಿರುವ ಹಿಂಸಾಚಾರ ಭುಗಿಲೆದ್ದಿದ್ದು, ಈ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇದರ ಪರಿಣಾಮ ರಾಜ್ಯದಿಂದ...
ಅಮರನಾಥ ಯಾತ್ರೆ (ಸಂಗ್ರಹ ಚಿತ್ರ)
ಅಮರನಾಥ ಯಾತ್ರೆ (ಸಂಗ್ರಹ ಚಿತ್ರ)
Updated on

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ನಡೆಸುತ್ತಿರುವ ಹಿಂಸಾಚಾರ ಭುಗಿಲೆದ್ದಿದ್ದು, ಈ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇದರ ಪರಿಣಾಮ ರಾಜ್ಯದಿಂದ ಯಾತ್ರೆಗೆ ಹೋಗಿದ್ದ ಸುಮಾರು 200ಕ್ಕೂ ಹೆಚ್ಚು ಭಕ್ತಾದಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಪರಿಸ್ಥಿತಿ ಸಾಕಷ್ಟು ಭಯವನ್ನುಂಟು ಮಾಡುತ್ತಿದ್ದು, ಈಗಾಗಲೇ ಸರ್ಕಾರದ ಸಹಾಯವನ್ನು ಕೇಳಲಾಗಿದೆ. ಸಂಕಷ್ಟಕ್ಕೆ ಸರ್ಕಾರ ಸ್ಪಂದನೆ ನೀಡಿದೆ ಎಂದು ಯಾತ್ರಾರ್ಥಿಯೊಬ್ಬರು ಮಾಹಿತಿ ನೀಡಿದ್ದಾರೆ.

ಯಾತ್ರಾರ್ಥಿಗಳ ನೆರವಿಗೆ ಸರ್ಕಾರ ಮೂವರು ಅಧಿಕಾರಿಗಳನ್ನು ನಿಯೋಜಿಸಿದೆ ಎಂದು ದೆಹಲಿ ಕರ್ನಾಟಕ ಭವನ ಕೂಡ ಸ್ಪಷ್ಟಪಡಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕ್ಯಾಂಪ್ ಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಕರ್ನಾಟಕ ರಾಜ್ಯದ ಯಾರ್ತಾರ್ಥಿಗಳಿದ್ದಾರೆ. ಪ್ರಸ್ತುತ ಎಲ್ಲರೂ ಸುರಕ್ಷಿತರಾಗಿದ್ದಾರೆ. ಸೇನಾ ಸಿಬ್ಬಂದಿಗಳು ಯಾತ್ರಾರ್ಥಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ದೆಹಲಿ ಕರ್ನಾಟಕ ಸ್ಥಳೀಯ ಆಯುಕ್ತ ಅತುಲ್ ತಿವಾರಿಯವರು ಹೇಳಿದ್ದಾರೆ.

ಇನ್ನು ರಾಜ್ಯದ ಯಾತ್ರಾರ್ಥಿಗಳ ಸಂಕಷ್ಟಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪ್ರತಿಕ್ರಿಯೆ ನೀಡಿದ್ದು, ಸಮಸ್ಯೆ ಪೀಡಿತ ಪ್ರದೇಶದಿಂದ ರಾಜ್ಯದ ಯಾತ್ರಾರ್ಥಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಕಳುಹಿಸುವಂತೆ ಹಾಗೂ ರಕ್ಷಣೆ ಕುರಿತಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ಗೃಹ ಸಚಿವ ರಾಜನಾಥ ಸಿಂಗ್ ಅವರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಭದ್ರತಾ ದೃಷ್ಠಿಯಿಂದ ಯಾತ್ರಾರ್ಥಿಗಳು ಬಸ್ ನಲ್ಲೇ ಉಳಿಯುವಂತೆ ಮನವಿ ಮಾಡಲಾಗಿದೆ. ಸೇನೆಯು ಯಾತ್ರಾರ್ಥಿಗಳಿಗೆ ಭದ್ರತೆಯನ್ನು ಒದಗಿಸುತ್ತಿದೆ. ಕಾಶ್ಮೀರದಿಂದ ಯಾತ್ರಾರ್ಥಿಗಳನ್ನು ಸುರಕ್ಷಿತ ತಾಣಕ್ಕೆ ತಲುಪಿಸುವಂತೆ ವಿಶೇಷ ವ್ಯವಸ್ಥೆ ಕಲ್ಪಿಸುವಂತೆ ಗೃಹ ಸಚಿವರ ಬಳಿ ಮನವಿ ಮಾಡಲಾಗಿದೆ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ.

ಸಹಾಯಕ್ಕಾಗಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಸಹಾಯವಾಣಿಯೊಂದನ್ನು ತೆರೆದಿದ್ದು, ಜನರಿಗೆ ಯಾತ್ರಾರ್ಥಿಗಳ ಬಗ್ಗೆ ಮಾಹಿತಿ ಅಥವಾ ಯಾತ್ರಾರ್ಥಿಗಳಿಗೆ ಏನೇ ಸಹಾಯ ಬೇಕಾದರು ಕರ್ನಾಟಕ ಭವನ ಅಥವಾ ನಿಯಂತ್ರಣ ಕೊಠಡಿ ( 01942506479) ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com