ನಟ ದರ್ಶನ್ ವಿರುದ್ಧ ಮತ್ತೆ ದೂರು ದಾಖಲಿಸಿದ ಪತ್ನಿ

ನನ್ನ ಪತಿ ದರ್ಶನ್ ಮನೆ ಹತ್ತಿರ ಬಂದು ಗಲಾಟೆ ಮಾಡುತ್ತಾರೆ, ಅವರನ್ನು ಕರೆಸಿ ಬುದ್ಧಿವಾದ ಹೇಳಿ ಎಂದು ದರ್ಶನ್ ಪತ್ನಿ...
ವಿಜಯಲಕ್ಷ್ಮೀ-ದರ್ಶನ್
ವಿಜಯಲಕ್ಷ್ಮೀ-ದರ್ಶನ್
ಬೆಂಗಳೂರು: ನನ್ನ ಪತಿ ದರ್ಶನ್ ಮನೆ ಹತ್ತಿರ ಬಂದು ಗಲಾಟೆ ಮಾಡುತ್ತಾರೆ, ಅವರನ್ನು ಕರೆಸಿ ಬುದ್ಧಿವಾದ ಹೇಳಿ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಮೂಲಕ ಮತ್ತೆ ದರ್ಶನ್ ದಾಂಪತ್ಯ ಕಿತ್ತಾಟ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕಳೆದು 7-8 ತಿಂಗಳಿಂದ ಪ್ರತ್ಯೇಕವಾಗಿ ವಿಜಯಲಕ್ಷ್ಮೀ ಅವರು ವಾಸವಾಗಿದ್ದರು. ದರ್ಶನ್ ಅವರು ರಾಜರಾಜೇಶ್ವರಿನಗರದಲ್ಲಿ ನೆಲೆಸಿದ್ದು, ಅವರ ಪತ್ನಿ ವಿಜಯಲಕ್ಷ್ಮೀ ಅವರು ಹೊಸಕೆರೆಹಳ್ಳಿಯ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು. 
ಹೊಸಕೆರೆಹಳ್ಳಿಯಲ್ಲಿರುವ ತಮ್ಮ ಮನೆ ಬಳಿ ಬಂದು ದರ್ಶನ್ ಅವರು ಗಲಾಟೆ ಮಾಡುತ್ತಾರೆ ಎಂದು ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ವಿಜಯಲಕ್ಷ್ಮೀ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅವರನ್ನು ಕರೆಸಿ ಬುದ್ಧಿವಾದ ಹೇಳಿ ಎಂದು ಮನವಿ ಮಾಡಿಕೊಂಡಿದ್ದಾರೆ. 
ಅಷ್ಟೇ ಅಲ್ಲದೇ, ವಿಜಯಲಕ್ಷ್ಮೀ ವಾಸವಾಗಿರುವ ಅಪಾರ್ಟ್ ಮೆಂಟ್ ನ ಭದ್ರತಾ ಸಿಬ್ಬಂದಿ ಮೇಲೆ ದರ್ಶನ್ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ. ದರ್ಶನ್ ಅವರು ಅಪಾರ್ಟ್ ಮೆಂಟ್ ಬಳಿ ಬಂದು ಒಳಗೆ ಹೋಗಲು ಕೇಳಿದ್ದಾರೆ. ಆದರೆ, ಭದ್ರತೆ ಹಿನ್ನಲೆಯಲ್ಲಿ ಒಳಗೆ ಬಿಡದಿದ್ದಾಗ, ಕುಪಿತಗೊಂಡ ದರ್ಶನ್ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸೆಕ್ಯೂರಿಟಿ ಗಾರ್ಡ್ ದೇವರಾಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
2011ರ ಸೆಪ್ಟೆಂಬರ್ ನಲ್ಲಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ವಿಜಯಲಕ್ಷ್ಮೀ ಅವರು, ನನ್ನ ಪತಿ ಹಲ್ಲೆ ನಡೆಸಿ, ರಿವಾಲ್ವರ್ ತೋರಿಸಿ ಕೊಲೆ ಬೆದರಿಕೆ ಹಾಕಿದ್ದರು ಎಂದು ದೂರು ಕೊಟ್ಟಿದ್ದರು. ಆಗ ಕೊಲೆ ಯತ್ನ ಆರೋಪದಡಿ ದರ್ಶನ್ ಅವರನ್ನು ಬಂಧಿಸಿದ್ದ ಪೊಲೀಸರು, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದರು. ಒಂದು ತಿಂಗಳು ಜೈಲಿನಲ್ಲಿದ್ದ ದರ್ಶನ್, ಜಾಮೀನು ಪಡೆದು ಬಿಡುಗಡೆಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com