ಕೊಟ್ಟಾಯಂ: ಕೇರಳ ವಿಧಾನಸಭಾ ಚುನಾವಣೆಗಳಲ್ಲಿ ಸೋಲುಂಡು ಅಧಿಕಾರದಿಂದ ಹೊರನಡೆಯಲಿರುವ ಕಾಂಗ್ರೆಸ್ ನೇತೃತ್ವದ ಯು ಡಿ ಎಫ್ ಮುಖ್ಯಮಂತ್ರಿ ಉಮನ್ ಚಾಂಡಿ, ಇಂತಹ ಸೋಲನ್ನು ನಿರೀಕ್ಷಿಸಿರಲಿಲ್ಲ ಎಂದು ಗುರುವಾರ ಹೇಳಿದ್ದಾರೆ.
"ಪ್ರಜಾಪ್ರಭುತ್ವದಲ್ಲಿ ಜನರ ಆಯ್ಕೆಯೇ ಅಂತಿಮ. ನಿರೀಕ್ಷಿಸಿಲ್ಲದಿದ್ದರೂ ಈ ಸೋಲನ್ನು ಒಪ್ಪಿಕೊಳ್ಳುತ್ತೇವೆ" ಎಂದು ಪುತುಪಲ್ಲಿನ ಅವರ ಮನೆಯಲ್ಲಿ ಸೋಲಿನಿಂದ ಅಚ್ಚರಿಗೊಂಡಿದ್ದ ಚಾಂಡಿ ಹೇಳಿದ್ದಾರೆ.
"ನಾವು ಅಧಿಕಾರಕ್ಕೆ ಬರುವ ಭರವಸೆಯಲಿದ್ದೆವು ಆದರೆ ಹೀಗಾಗಿದೆ. ಈಗ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಲಿದ್ದೇವೆ" ಎಂದು ಹೇಳಿದ್ದಾರೆ
ವಿಸರ್ಜನೆಯಾಗಲಿರುವ ವಿಧಾನಸಭೆಯಲ್ಲಿ ೩೯ ಕ್ಷೇತ್ರಗಳನ್ನು ಗೆದ್ದಿದ್ದ ಕಾಂಗ್ರೆಸ್ ಈಗ ಕೇವಲ ೨೩ ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸುವ ಸಾಧ್ಯತೆಯಿದ್ದು, ಯುಡಿಎಫ್ ಒಟ್ಟಾರೆ ೧೪೦ ಕ್ಷೇತ್ರಗಲ್ಲಿ ೪೬ ಕಡೆ ಮುಂಚೂಣಿಯಲ್ಲಿದೆ.
ಸಿ ಪಿ ಐ- ಎಂ ನೇತೃತ್ವದ ಎಲ್ ಡಿ ಎಫ್ ೯೨ ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಲಕ್ಷಣಗಳಿದ್ದು, ಬಿಜೆಪಿ ಒಂದು ಸ್ಥಾನ ಪಡೆದು ಕೇರಳದಲ್ಲಿ ಖಾತೆ ತೆರೆದಿದೆ.
"ಯುಡಿಎಫ್ ಅಧ್ಯಕ್ಷನಾಗಿ ಈ ಸೋಲಿನ ಹೊಣೆ ಹೊರುತ್ತೇನೆ" ಎಂದಿದ್ದಾರೆ ಚಾಂಡಿ.
Advertisement