ಆಂಧ್ರ: ಮಧ್ಯರಾತ್ರಿಯಲ್ಲಿ ಟಿಪ್ಪರ್ ಹರಿದು ೬ ಕಾರ್ಮಿಕರ ಸಾವು

ಕೆಟ್ಟ ವಾಹನವನ್ನು ಸರಿಪಡಿಸುವಾಗ ರಸ್ತೆ ಬದಿಯಲ್ಲಿ ನಿಂತಿದ್ದ ಆರು ದಿನಗೂಲಿ ಕಾರ್ಮಿಕರ ಮೇಲೆ ಮಧ್ಯರಾತ್ರಿಯ ವೇಳೆ ಟಿಪ್ಪರ್ ಹರಿದ ಕಾರಣ ಅವರೆಲ್ಲ ಮೃತಪಟ್ಟ ದುರ್ಘಟನೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಿಜಯವಾಡ: ಕೆಟ್ಟ ವಾಹನವನ್ನು ಸರಿಪಡಿಸುವಾಗ ರಸ್ತೆ ಬದಿಯಲ್ಲಿ ನಿಂತಿದ್ದ ಆರು ದಿನಗೂಲಿ ಕಾರ್ಮಿಕರ ಮೇಲೆ ಮಧ್ಯರಾತ್ರಿಯ ವೇಳೆ ಟಿಪ್ಪರ್ ಹರಿದ ಕಾರಣ ಅವರೆಲ್ಲ ಮೃತಪಟ್ಟ ದುರ್ಘಟನೆ ಆಂಧ್ರಪ್ರದೇಶದಲ್ಲಿ ಸಂಭವಿಸಿದ್ದು, ಏಳು ಜನರಿಗೆ ಗಂಭೀರ ಗಾಯಗಳಾಗಿವೆ. 
ನೆನ್ನೆ ಮಧ್ಯರಾತ್ರಿಯ ನಂತರ ಕೃಷ್ಣ ಜಿಲ್ಲೆಯ ತುಕ್ಕುಲೂರು ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. 
೩೦ ಕಾರ್ಮಿಕರಿದ್ದ ಈ ತಂಡ ಪಶ್ಚಿಮ ಗೋದಾವರಿ ಜಿಲ್ಲೆಯ ಗುಗ್ಗಳ ಮಂಗಮ್ಮ ದೇವಾಲಯಕ್ಕೆ ತೆರಳುತ್ತಿದ್ದರು. ಬುಧವಾರ ರಾತ್ರಿ ಎರಡು ೧೦ ಸೀಟುಗಳ ಆಟೋರಿಕ್ಷಾಗಳನ್ನು ತೆಗೆದುಕೊಂಡು ಪ್ರಯಾಣಿಸುತ್ತಿದ್ದರು. ಮಧ್ಯರಾತ್ರಿಯಲ್ಲಿ ಒಂದು ಆಟೋ ಕೆಟ್ಟಿದ್ದಕ್ಕೆ ಅದನ್ನು ಸರಿಪಡಿಸಲು ಆಗಷ್ಟೇ ಚಾಲಕ ಬದಿಗೆ ನಿಲ್ಲಿಸಿದ್ದ. 
ವಾಹನ ಸರಿಯಾಗಲು ಕಾಯುತ್ತಿದ್ದ ಕಾರ್ಮಿಕರ ಮೇಲೆ ವೇಗವಾಗಿ ಬಂದ ಕಾಂಕ್ರೀಟ್ ಇಟ್ಟಿಗೆಗಳನ್ನು ತುಂಬಿದ್ದ ಟಿಪ್ಪರ್ ಹರಿದು ಆಟೊಗು ಗುದ್ದಿದೆ. ಆರು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ. 
ನುಸ್ವಿದ್ ಗ್ರಾಮ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಗೃಹ ಸಚಿವ ನಿಮ್ಮಕಯಲ ಚಿಣರಾಜಪ್ಪ ಸವಿವರ ವರದಿ ಸಲ್ಲಿಸುವಂತೆ ಪೊಲೀಸರಿಗೆ ಹೇಳಿದ್ದಾರೆ. 
ಮೃತಪಟ್ಟ ಕಾರ್ಮಿಕರನ್ನು ಗುರ್ರಮ್ ಶ್ರೀನು (೩೫), ಪಾಂಡೇತಿ ವೀರಯ್ಯ (೪೫), ಗರಿಕೆ ಕೃಷ್ಣ ಕಿಶೋರ್ (೩೦), ಕಳವಕೊಳ್ಳು ಶ್ರೀನು (೪೦), ಪಾಂಡೇತಿ ರಾಣಿ (೨೨) ಮತ್ತು ಕಳವಕೊಳ್ಳು ಚೀನಾ ವೆಂಕಟೇಶ್ವರ್ ರಾವ್ ಎಂದು ಗುರುತಿಸಲಾಗಿದೆ. 
ನಕ್ಕ ಜಮಲಯ್ಯ (೨೨), ದೇವರಕೊಂಡ ರಮಣ (೨೫), ತುವ್ವಕುಲ ರಾಮುಲು (೩೦), ಕಳವಕ್ಕೊಳು ರಮಣ (೨೫), ನಂದ್ಯಾಳ ದುರ್ಗಾ ರಾವ್ (೩೦), ಕಳವಕೊಳ್ಳು ಪೆದ್ದ ವೆಂಕಟೇಶ್ವರ್ ರಾವ್ (೭೪), ಕಳವಕೊಳ್ಳು ರಾಮುಲಮ್ಮ (೬೦) ಇವರುಗಳಿಗೆ ಗಂಭೀರ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com