ನೋಟು ನಿಷೇಧ ಮಾಹಿತಿ ಮೊದಲೇ ಸೋರಿಕೆ?; ವಿಪಕ್ಷಗಳಿಂದ ತನಿಖೆಗೆ ಆಗ್ರಹ

ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮವನ್ನು ಖಂಡಿಸಿ ವಿಪಕ್ಷಗಳು ನಡೆಸುತ್ತಿರುವ ಹೋರಾಟ ತಾರಕಕ್ಕೇರಿದ್ದು, ನೋಟು ನಿಷೇಧದ ಬಿಸಿ ಕೇವಲ ಜನಸಾಮಾನ್ಯರಿಗೆಷ್ಟೇ..ಶ್ರೀಮಂತರಿಗಲ್ಲ ಎಂದು ಆರೋಪಿಸಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮವನ್ನು ಖಂಡಿಸಿ ವಿಪಕ್ಷಗಳು ನಡೆಸುತ್ತಿರುವ ಹೋರಾಟ ತಾರಕಕ್ಕೇರಿದ್ದು, ನೋಟು ನಿಷೇಧದ ಬಿಸಿ ಕೇವಲ ಜನಸಾಮಾನ್ಯರಿಗೆಷ್ಟೇ..ಶ್ರೀಮಂತರಿಗಲ್ಲ ಎಂದು ಆರೋಪಿಸಲಾಗುತ್ತಿದೆ.

ಶ್ರೀಮಂತರಿಗೆ ಹಾಗೂ ಪ್ರಮುಖ ಉಧ್ಯಮಿಗಳಿಗೆ ನೋಟು ಬದಲಾವಣೆ ಕುರಿತಂತೆ ಮೊದಲೇ ಮಾಹಿತಿ ಸೋರಿಕೆಯಾಗಿದ್ದು, ಅವರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ ಸರ್ಕಾರದ ಒಳತಂತ್ರಗಾರಿಕೆ ಅರ್ಥೈಸಿಕೊಳ್ಳದ ಜನಸಾಮಾನ್ಯರು ಮಾತ್ರ ಬ್ಯಾಂಕುಗಳ ಮುಂದೆ ಬೆಳಗಿನಿಂದ ಸರತಿ ಸಾಲಲ್ಲಿ ನಿಂತು ಕಷ್ಟ ಅನುಭವಿಸುತ್ತಿದ್ದಾರೆ. ಯಾವೊಬ್ಬ ಉಧ್ಯಮಿಯಾಗಲಿ ಅಥವಾ ಶ್ರೀಮಂತರಾಗಲೀ ಬ್ಯಾಂಕುಗಳ ಮುಂದೆ ಹಣ ಬದಲಾವಣೆಗೆ ನಿಂತಿಲ್ಲ. ಹೀಗಾಗಿ ಸರ್ಕಾರವೇ ನೋಟು ಬದಲಾವಣೆ ಮಾಹಿತಿ ಸೋರಿಕೆ ಮಾಡಿದ್ದು, ಕೂಡಲೇ ಈ ಬಗ್ಗೆ ತನಿಖೆ ನಡೆಸುವಂತೆ ಪ್ರತಿಪಕ್ಷಗಳು ಆಗ್ರಹಿಸಿವೆ.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಆನಂದ್ ಶರ್ಮಾ ಅವರು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಇತ್ತ ವಯೋವೃದ್ಧರು ಮತ್ತು ಮಹಿಳೆಯರು ಬಿಸಿಲನ್ನೂ ಲೆಕ್ಕಿಸದೇ ಬ್ಯಾಂಕುಗಳ ಮುಂದೆ ನಿಂತಿದ್ದರೆ ಅತ್ತ ಪ್ರಧಾನಿ ನರೇಂದ್ರ ಮೋದಿ ಜಪಾನ್ ಗೆ ಹಾರಿ ಅಲ್ಲಿ ಬುಲೆಟ್ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಜನಸಾಮಾನ್ಯರ ಕಷ್ಟಗಳು ಅವರಿಗೆ ಕಾಣುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಉಧ್ಯಮಿಗಳ ಪರ ಎನ್ ಡಿಎ ಸರ್ಕಾರ ನೋಟು ನಿಷೇಧದ ಕುರಿತು ಮೊದಲೇ ಮಾಹಿತಿ ನೀಡಿದ್ದು, ಈ ಬಗ್ಗೆ ತನಿಖೆಯಾಗಲೇ ಬೇಕು ಎಂದು ಆಗ್ರಹಿಸಿದ್ದಾರೆ.

ದೇಶದ ಪ್ರಮುಖ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಕಳೆದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲೇ ನೋಟು ನಿಷೇಧದ ಕುರಿತು ಮಾಹಿತಿ ಇತ್ತು ಎಂದು ಕೆಲ ಪತ್ರಿಕೆಗಳ ವರದಿ ಮಾಡಿವೆ. ಅಲ್ಲದೆ ಗುಜರಾತಿ ದೈನಿಕವೊಂದು ಈ ಬಗ್ಗೆ ಮೊದಲೇ ಸುದ್ದಿ ಪ್ರಕಟ ಮಾಡಿತ್ತು. ಈ ಎಲ್ಲ ವಿಚಾರಗಳನ್ನು ಗಮನಿಸಿದರೆ ನೋಟು ನಿಷೇಧ ವಿಚಾರವನ್ನು ಸ್ಥಳೀಯ ಬಿಜೆಪಿ ಘಟಕಗಳು ಸೋರಿಕೆ ಮಾಡಿರಬಹುದು ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪ್ರಕರಣವನ್ನು ಉಭಯ ಸದನಗಳನ್ನು ಗಂಭೀರವಾಗಿ ಪರಿಗಣಿಸಿ ಸಂಸದೀಯ ಸಮಿತಿಯ ತನಿಖೆಗೊಳಪಡಿಸಬೇಕು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಆಗ್ರಹಕ್ಕೆ ಜೆಡಿ(ಯು), ಆರ್ ಜೆಡಿ, ಎಸ್ಪಿ, ಬಿಎಸ್ಪಿ, ತೃಣಮೂಲ ಕಾಂಗ್ರೆಸ್,  ಎಐಎಡಿಎಂಕೆ ಮತ್ತು ಎಡಪಕ್ಷಗಳು ಬೆಂಬಲ ನೀಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com