ದೆಹಲಿ: ಜಮ್ಮು ಕಾಶ್ಮೀರದ ಉರಿ ಸೇನಾ ನೆಲೆಯ ಮೇಲೆ ದಾಳಿ ನಡೆದ ಕೆಲ ಗಂಟೆಗಳಲ್ಲೇ ಭಾರತ ಯಾವುದೇ ತನಿಖೆ ನಡೆಸದೇ, ಸಾಕ್ಷ್ಯಾಧಾರಗಳಿಲ್ಲದೇ ಪಾಕಿಸ್ತಾನದ ವಿರುದ್ಧ ಆರೋಪ ಮಾಡಿದೆ ಎಂದು ಪಾಕಿಸ್ತಾನ ಪ್ರಧಾನ ಮಂತ್ರಿ ನವಾಜ್ ಷರೀಫ್ ಆರೋಪಿಸಿದ್ದಾರೆ.
ಪಾಕಿಸ್ತಾನ ಸಂಸತ್ ನಲ್ಲಿ ಮಾತನಾಡಿದ ಅವರು, ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ಭಾರತ ನಡೆಸಿದ ಗುಂಡಿನ ದಾಳಿಗೆ ಪಾಕ್ ನ ಇಬ್ಬರು ಯೋಧರನ್ನು ಹತ್ಯೆಗೈದಿದೆ ಎಂದು ತಿಳಿಸಿದ್ದಾರೆ.
ಯುದ್ಧಕ್ಕೆ ನಮ್ಮ ಸೇನೆ ಸನ್ನದ್ಧ, ಆದರೆ ನಾವು ಯುದ್ದಕ್ಕೆ ವಿರುದ್ಧವಾಗಿದ್ದೇವೆ, ಬದಲಾಗಿ ಶಾಂತಿ ಬಯಸುತ್ತೇವೆ ಎಂದು ಪಾಕಿಸ್ತಾನ ಸಂಸತ್ ನಲ್ಲಿ ನವಾಜ್ ಷರೀಫ್ ಹೇಳಿದ್ದಾರೆ.
ಬುರ್ಹಾನ್ ವನಿ ಕಾಶ್ಮೀರ ಹೋರಾಟದ ಹೀರೋ ಎಂದು ನವಾಜ್ ಷರೀಫ್ ಆತನನ್ನು ಹಾಡಿ ಹೊಗಳಿದ್ದಾರೆ. ಕಾಶ್ಮೀರಕ್ಕಾಗಿ ಆತ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.
ಕಾಶ್ಮೀರ ಸೇರಿದಂತೆ ಎಲ್ಲಾ ವಿಷಯಗಳನ್ನು ಮಾತುಕತೆ ಮೂಲಕ ಬಗೆ ಹರಿಸಿಕೊಳ್ಳಲು ನಾವು ಬಯಸುತ್ತಿದ್ದೇವೆ.ಆದರೆ ಭಾರತ ಇದಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸುತ್ತಿಲ್ಲ ಎಂದ ಅವರು, ಪಾಕಿಸ್ತಾನ ಭಯೋತ್ಪಾದನೆಗೆ ಬಲಿಪಶುವಾಗುತ್ತಿದೆ ಎಂದು ತಿಳಿಸಿದ್ದಾರೆ.
Advertisement