ನವದೆಹಲಿ: ಏಷ್ಯಾದಲ್ಲಿ ಒಂದು ಮೈಂಡ್ ಸೆಟ್(ಮನೋಭಾವ) ಮಾತ್ರ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದ್ದು, ಭಾರತ ಹಾಗೂ ಬಾಂಗ್ಲಾದೇಶ ಅದರ ಬಲಿಪಶುವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಪಾಕಿಸ್ತಾನದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಭಾರತ ಪ್ರವಾಸದಲ್ಲಿರುವ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸಿನಾ ಉಪಸ್ಥಿತಿಯಲ್ಲಿ ಇಂದು 1971ರ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಭಾರತದೊಂದಿಗೆ ನೆರೆಯ ರಾಷ್ಟ್ರಗಳು ಸಹ ಅಭಿವೃದ್ಧಿ ಪಥದಲ್ಲಿ ಸಾಗಬೇಕು ಎಂದು ನಾನು ಬಯಸುತ್ತೇನೆ. ನಮ್ಮ ಸುತ್ತಮುತ್ತಲಿನ ಪ್ರದೇಶ ಸಹ ಅಭಿವೃದ್ಧಿಯಾಗಬೇಕು. ಆದರೆ ದಕ್ಷಿಣ ಏಷ್ಯಾದಲ್ಲಿ ನಮ್ಮ ಈ ಮನೋಭಾವಕ್ಕೆ ವಿರುದ್ಧವಾಗಿ ಒಂದು ಮನಸ್ಥಿತಿ ಇದೆ. ಆ ಮನಸ್ಥಿತಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದೆ. ಮಾನವೀಯತೆ ಆಧಾರದ ಮೇಲೆ ಅದರ ವ್ಯವಸ್ಥೆ ಇಲ್ಲ. ಹಿಂಸೆ ಮತ್ತು ಭಯೋತ್ಪಾದನೆ ಮೇಲೆ ಅದರ ವ್ಯವಸ್ಥೆ ನಿಂತಿದೆ ಎಂದರು.
ಆ ದೇಶದ ಈ ಮನಸ್ಥಿತಿ ಶಾಂತಿ, ಸೌಹಾರ್ದತೆ ಹಾಗೂ ಅಭಿವೃದ್ಧಿಗೆ ದೊಡ್ಡ ಸವಾಲು ಆಗಿದ್ದು, ಇದು ಇಡೀ ಪ್ರದೇಶದ ಅಭಿವೃದ್ಧಿಗೆ ಮಾರಕವಾಗುತ್ತಿದೆ ಎಂದು ಪ್ರಧಾನಿ ಮೋದಿ ಪಾಕಿಸ್ತಾನದ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.
ಇದಕ್ಕು ಮುನ್ನ ಬಾಂಗ್ಲಾ ಹಾಗೂ ಭಾರತದ ನಾಯಕರು, ರಕ್ಷಣೆ, ಪರಮಾಣು ಸಹಕಾರ, ರೈಲು ಮತ್ತು ಬಸ್ ಸೇವೆ ಸೇರಿದಂತೆ ಒಟ್ಟು 22 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ್ದರು.