ಪ್ರಧಾನ ಸುದ್ದಿ
ರಹಸ್ಯ ಮತದಾನಕ್ಕೆ ಪನ್ನೀರ್ ಸೆಲ್ವಂ ಮನವಿ, ಪಳನಿಸ್ವಾಮಿ ವಿರುದ್ಧ ಕಾಂಗ್ರೆಸ್, ಡಿಎಂಕೆ ಮತ
ಕಳೆದ ಎರಡು ವಾರಗಳಿಂದ ತಮಿಳುನಾಡು ರಾಜಕೀಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ನಾಳೆ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ...
ಚೆನ್ನೈ: ಕಳೆದ ಎರಡು ವಾರಗಳಿಂದ ತಮಿಳುನಾಡು ರಾಜಕೀಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ನಾಳೆ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ನೂತನ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ವಿಶ್ವಾಸಮತ ಯಾಚಿಸಲಿದ್ದಾರೆ. ಈ ವೇಳೆ ರಹಸ್ಯ ಮತದಾನಕ್ಕೆ ಅವಕಾಶ ನೀಡಬೇಕು ಎಂದು ಎಐಎಡಿಎಂಕೆ ಬಂಡಾಯ ನಾಯಕ ಓ ಪನ್ನೀರ್ ಸೆಲ್ವಂ ಅವರು ಸ್ಪೀಕರ್ ಗೆ ಮನವಿ ಮಾಡಿದ್ದಾರೆ.
ಈ ಮಧ್ಯೆ ಇಂದು ದಿಢೀರ್ ಶಾಸಕಾಂಗ ಪಕ್ಷದ ಸಭೆ ನಡೆಸಿದ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಅವರು, ತಮ್ಮ ಪಕ್ಷ ಪಳನಿಸ್ವಾಮಿ ನೇತೃತ್ವದ ಸರ್ಕಾರದ ವಿರುದ್ಧ ಮತ ಚಲಾಯಿಸಲಿದೆ ಎಂದು ಹೇಳಿದ್ದಾರೆ.
ಶಾಸಕಾಂಗ ಪಕ್ಷದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟಾಲಿನ್, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು, ಎಐಎಡಿಎಂಕೆ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಸಾಮಾನ್ಯ ಜನರ ಸ್ಥಿತಿ ದುಸ್ಥರವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಮತ ಚಲಾಯಿಸಲು ಡಿಎಂಕೆ ನಿರ್ಧರಿಸಿದೆ ಎಂದರು.
ಇನ್ನು ಪನ್ನೀರ್ ಸೆಲ್ವಂ ಬಣದ ಎಐಎಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಮಧುಸೂದನನ್ ಅವರು ಮುಖ್ಯಮಂತ್ರಿ ಪಳನಿಸ್ವಾಮಿ ಸೇರಿದಂತೆ 13 ಜಿಲ್ಲಾ ಕಾರ್ಯದರ್ಶಿಗಳನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ. ಮತ್ತೊಂದು ಕಡೆ ಪನ್ನೀರ್ ಸೆಲ್ವಂ ಅವರು, ಪಳನಿಸ್ವಾಮಿ ಸರ್ಕಾರದ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ಅಮ್ಮ ಬೆಂಬಲಿಗರನ್ನು ಬಂಧಿಸದಂತೆ ತಮಿಳುನಾಡು ಪೊಲೀಸರಿಗೆ ಪತ್ರ ಬರೆದಿದ್ದಾರೆ.