ವಿಶ್ವಾಸ ಮತ ಗೆದ್ದ ಪಳನಿಸ್ವಾಮಿ, ತಮಿಳುನಾಡಿನಾದ್ಯಂತ ಪ್ರತಿಭಟನೆ, ಡಿಎಂಕೆ ನಾಯಕರ ಬಂಧನ

ತೀವ್ರ ಕೋಲಾಹಲದ ನಡುವೆಯೇ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು ಶನಿವಾರ ವಿಧಾನಸಭೆಯಲ್ಲಿ...
ವಿಶ್ವಾಸಮತ ಗೆದ್ದ ಬಳಿಕ ಪಳನಿಸ್ವಾಮಿ ಹಾಗೂ ಶಾಸಕರು
ವಿಶ್ವಾಸಮತ ಗೆದ್ದ ಬಳಿಕ ಪಳನಿಸ್ವಾಮಿ ಹಾಗೂ ಶಾಸಕರು
ಚೆನ್ನೈ: ತೀವ್ರ ಕೋಲಾಹಲದ ನಡುವೆಯೇ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು ಶನಿವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಗಳಿಸಿದ್ದಾರೆ. ಆದರೆ ನೂತನ ಮುಖ್ಯಮಂತ್ರಿ ವಿರುದ್ಧ ತಮಿಳುನಾಡಿನಾದ್ಯಂತ ಡಿಎಂಕೆ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪಳನಿಸ್ವಾಮಿ ಅವರು ಅಕ್ರಮವಾಗಿ ವಿಶ್ವಾಸಮತ ಗಳಿಸಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷ ನಾಯಕ ಎಂ.ಕೆ. ಸ್ಟಾಲಿನ್ ಅವರ ನೇತೃತ್ವದಲ್ಲಿ ಡಿಎಂಕೆ ಚೆನ್ನೈನ ಮರೀನಾ ಬೀಚ್ ನಲ್ಲಿ ಪ್ರತಿಭಟನೆ ನಡೆಸುತ್ತಿತ್ತು. ಆದರೆ ಪ್ರತಿಭಟನೆಗೆ ಪರವಾನಗಿ ಪಡೆದಿಲ್ಲ ಎಂದು ಚೆನ್ನೈ ಪೊಲೀಸರು ಸ್ಟಾಲಿನ್ ಸೇರಿದಂತೆ ಡಿಎಂಕೆ ಎಲ್ಲಾ ಶಾಸಕರನ್ನು ಬಂಧಿಸಿದ್ದಾರೆ.
ಡಿಎಂಕೆ ನಾಯಕರ ಬಂಧನದ ತಮಿಳುನಾಡಿನ ಹಲವು ಕಡೆ ಪ್ರತಿಭಟನೆಗಳು ಆರಂಭವಾಗಿದ್ದು, ಇಂದು ಸಂಜೆ ಪಕ್ಷದ ಸಾವಿರಾರು ಕಾರ್ಯಕರ್ತರು ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಇದಕ್ಕು ಮುನ್ನ ಡಿಎಂಕೆ ಶಾಸಕರು ರಹಸ್ಯ ವಿಶ್ವಾಸ ಮತಕ್ಕೆ ಅವಕಾಶ ನೀಡದ ವಿಧಾನಸಭೆ ಸ್ಪೀಕರ್ ಧನಪಾಲ್ ಅವರ ಅವರ ವಿರುದ್ಧ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. 
ಬೆಳಗ್ಗೆ 11 ಗಂಟೆಗೆ ತಮಿಳುನಾಡು ವಿಧಾನಸಭೆಯಲ್ಲಿ ವಿಶೇಷ ಕಲಾಪ ಆರಂಭವಾಯಿತು. ಸ್ಪೀಕರ್ ಧನಪಾಲ್ ಅವರು ಪಳನಿ ಸ್ವಾಮಿ ಅವರು ವಿಶ್ವಾಸ ಮತ ಕೋರಿ ನಿರ್ಣಯ ಮಂಡನೆ ಮಾಡಿದರು. ಕೋಲಾಹಲದ ನಡುವೆಯೇ ಪಳನಿಸ್ವಾಮಿ ವಿಶ್ವಾಸ ಮತ ಗೆದ್ದಿದ್ದು, ಮುಖ್ಯಮಂತ್ರಿ ಪರವಾಗಿ 122 ಮತ ಚಲಾವಣೆಯಾದರೆ, ವಿರುದ್ಧವಾಗಿ 11 ಮತಗಳು ಚಲಾವಣೆಯಾಗಿವೆ.
ಇದೇ ವೇಳೆ ಗುಪ್ತ ಮತದಾನ ನಡೆಸುವಂತೆ ಬಿಗಿ ಪಟ್ಟು ಹಿಡಿದು ಕಲಾಪಕ್ಕೆ ಅಡ್ಡಿ ಪಡಿಸಿದ್ದ ಡಿಎಂಕೆ ಶಾಸಕರನ್ನು ಸ್ಪೀಕರ್ ಧನಪಾಲ್ ಹೊರಗೆ ಹಾಕಿದ ಪ್ರಸಂಗ ನಡೆದಿದೆ. ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್ ಸೇರಿದಂತೆ ಎಲ್ಲ ಶಾಸಕರನ್ನೂ ಮಾರ್ಷಲ್ ಗಳ ಮೂಲಕ ಕಲಾಪದಿಂದ ಹೊರಗೆ ಹಾಕಿಸಲಾಯಿತು. 
ಡಿಎಂಕೆ ಶಾಸಕರ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಶಾಸಕರು ಮತದಾನ ಬಹಿಷ್ಕರಿಸಿದರೆ, ಪನ್ನೀರ್ ಸೆಲ್ವಂ ಬಣ ಪ್ರತಿಭಟನೆ ನಡೆಸಿತು. ಪ್ರತಿಭಟನೆ ಮತ್ತು ಕೋಲಾಹಲದ ನಡುವೆಯೇ ಸ್ಪೀಕರ್ ಧ್ವನಿ ಮತದ ಮೂಲಕ ತಲೆ ಎಣಿಕೆ ಕಾರ್ಯ ಪೂರ್ಣಗೊಳಿಸಿ ಫಲಿತಾಂಶ ಪ್ರಕಟಿಸಿದರು.
ಪ್ರತಿಪಕ್ಷಗಳಿಲ್ಲದೇ ಕಲಾಪ, ಧ್ವನಿ ಮತಕ್ಕೆ ಸೂಚನೆ ನೀಡಿದ ಸ್ಪೀಕರ್ ಧನಪಾಲ್
ಭಾರಿ ಕೋಲಾಹಲಕ್ಕೆ ಕಾರಣವಾಗಿರುವ ಪಳನಿ ಸ್ವಾಮಿ ವಿಶ್ವಾಸ ಮತ ಯಾಚನೆಗೆ ಅಡ್ಡಿ ಪಡಿಸಿದ್ದ ಡಿಎಂಕೆ ಪಕ್ಷದ ಶಾಸರಕನ್ನು ಸದನದಿಂದ ಸ್ಪೀಕರ್ ಧನಪಾಲ್ ಅವರು ಉಚ್ಛಾಟನೆ ಮಾಡಿದ್ದು, ಡಿಎಂಕೆ ಶಾಸಕರಿಲ್ಲದೇ ವಿಶ್ವಾಸ ಮತ ನಿರ್ಣಯದ ಮತದಾನಕ್ಕೆ ಸೂಚನೆ ನೀಡಿದ್ದಾರೆ.
ಮಾರ್ಷಲ್ ಗಳ ಮೂಲಕ ಸದನದಲ್ಲಿದ್ದ ಡಿಎಂಕೆ ಶಾಸಕರನ್ನು ಬಲವಂತವಾಗಿ ಸ್ಪೀಕರ್ ಧನಪಾಲ್ ಅವರು ಹೊರಗೆ ಹಾಕಿಸಿದ್ದು, ಈ ವೇಳೆ ಭಾರಿ ಕೋಲಾಹಲವೇ ಉಂಟಾಗಿತ್ತು. ಮಾರ್ಷಲ್ ಗಳು ಮತ್ತು ಶಾಸಕರ ನಡುವೆ ತಳ್ಳಾಟ ಸಂಭವಿಸಿ ಬಹುತೇಕ ಶಾಸಕ ಶರ್ಟ್ ಮತ್ತು ಪಂಚೆಗಳು ಹರಿದು ಹೋದ ಘಟನೆ ಕೂಡ ಸಾಮಾನ್ಯವಾಗಿತ್ತು. ಸ್ವತಃ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಹರಿದ ಶರ್ಟ್ ನಲ್ಲಿಯೇ ಮಾಧ್ಯಮಗಳನ್ನು ಕರೆದು ಪ್ರತಿಕ್ರಿಯೆ ನೀಡಿದ್ದು ವಸದನದಲ್ಲಿನ ಕೋಲಾಹಲಕ್ಕೆ ಹಿಡಿದ ಕನ್ನಡಿಯಾಗಿತ್ತು.
ಈ ವೇಳೆ ಮಾತನಾಡಿದ ಸ್ಟಾಲಿನ್ ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ಧವಾಗಿ ಸದನದಲ್ಲಿ ನಡೆದುಕೊಳ್ಳಲಾಗುತ್ತಿದೆ. ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡುವುದಾಗಿ ಹೇಳಿದ್ದಾರೆ.
30 ವರ್ಷಗಳ ನಂತರ ತಮಿಳುನಾಡಿನಲ್ಲಿ ವಿಶ್ವಾಸ ಮತ ಯಾಚನೆ
ತಮಿಳುನಾಡು ವಿಧಾನಸಭೆಯಲ್ಲಿ 30 ವರ್ಷಗಳ ಬಳಿಕ ಬಹುಮತ ಸಾಬೀತುಪಡಿಸುವ ಪ್ರಕ್ರಿಯೆ ನಡೆದಿದ್ದು, ಈ ಹಿಂದೆ, ಅಂದರೆ 1988ರಲ್ಲಿ ಎಂಜಿಆರ್‌ ಸಾವಿನ ಬಳಿಕ ನಡೆದ ರಾಜಕೀಯ ಬಿಕ್ಕಟ್ಟು ಎಂಜಿಆರ್‌ ಅವರ ಪತ್ನಿ ಜಾನಕಿ ಅವರನ್ನು ಬಹುಮತ ಸಾಬೀತುಪಡಿಸುವಂತೆ ಮಾಡಿತ್ತು. ಸಭಾತ್ಯಾಗ, ಗದ್ದಲ, ಗೊಂದಲಗಳ ನಡುವೆ ಕೊನೆಗೂ ವಿಶ್ವಾಸಮತ ಗಳಿಸುವಲ್ಲಿ ಜಾನಕಿ ಅವರು ಯಶಸ್ವಿಯಾಗಿದ್ದರು. ಆದರೆ, ಇದಾದ ಎರಡೇ ದಿನಗಳಲ್ಲಿ ಅವರ ಸರ್ಕಾರವನ್ನು ಕೇಂದ್ರ ಸರ್ಕಾರ ವಜಾ ಮಾಡಿತ್ತು. ಅಸೆಂಬ್ಲಿಯಲ್ಲಿ ನಡೆದ ಗದ್ದಲವನ್ನೇ ಮುಂದಿಟ್ಟುಕೊಂಡು ಸರ್ಕಾರವನ್ನು ವಜಾ ಮಾಡಿ ಅಂದಿನ ಪ್ರಧಾನಿ ರಾಜೀವ್‌ಗಾಂಧಿ ಆದೇಶ ಹೊರಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com