ತಮಿಳುನಾಡು ವಿಧಾನಸಭೆಯಲ್ಲಿ 30 ವರ್ಷಗಳ ಬಳಿಕ ಬಹುಮತ ಸಾಬೀತುಪಡಿಸುವ ಪ್ರಕ್ರಿಯೆ ನಡೆದಿದ್ದು, ಈ ಹಿಂದೆ, ಅಂದರೆ 1988ರಲ್ಲಿ ಎಂಜಿಆರ್ ಸಾವಿನ ಬಳಿಕ ನಡೆದ ರಾಜಕೀಯ ಬಿಕ್ಕಟ್ಟು ಎಂಜಿಆರ್ ಅವರ ಪತ್ನಿ ಜಾನಕಿ ಅವರನ್ನು ಬಹುಮತ ಸಾಬೀತುಪಡಿಸುವಂತೆ ಮಾಡಿತ್ತು. ಸಭಾತ್ಯಾಗ, ಗದ್ದಲ, ಗೊಂದಲಗಳ ನಡುವೆ ಕೊನೆಗೂ ವಿಶ್ವಾಸಮತ ಗಳಿಸುವಲ್ಲಿ ಜಾನಕಿ ಅವರು ಯಶಸ್ವಿಯಾಗಿದ್ದರು. ಆದರೆ, ಇದಾದ ಎರಡೇ ದಿನಗಳಲ್ಲಿ ಅವರ ಸರ್ಕಾರವನ್ನು ಕೇಂದ್ರ ಸರ್ಕಾರ ವಜಾ ಮಾಡಿತ್ತು. ಅಸೆಂಬ್ಲಿಯಲ್ಲಿ ನಡೆದ ಗದ್ದಲವನ್ನೇ ಮುಂದಿಟ್ಟುಕೊಂಡು ಸರ್ಕಾರವನ್ನು ವಜಾ ಮಾಡಿ ಅಂದಿನ ಪ್ರಧಾನಿ ರಾಜೀವ್ಗಾಂಧಿ ಆದೇಶ ಹೊರಡಿಸಿದ್ದರು.