ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಶನಿವಾರ ಲಕ್ಷುರಿ ಬಸ್ಸೊಂದು ಟ್ರಕ್ ಗೆ ಗುದ್ದಿದ ಪರಿಣಾಮ ನಾಲ್ವರು ಮೃತಪಟ್ಟಿದ್ದು, ೪೦ ಕ್ಕೂ ಹೆಚ್ಚು ಜನಗಳಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಶನಿವಾರ ಲಕ್ಷುರಿ ಬಸ್ಸೊಂದು ಟ್ರಕ್ ಗೆ ಗುದ್ದಿದ ಪರಿಣಾಮ ನಾಲ್ವರು ಮೃತಪಟ್ಟಿದ್ದು, ೪೦ ಕ್ಕೂ ಹೆಚ್ಚು ಜನಗಳಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
"ಕಬ್ಬಿಣದ ಸರಳುಗಳನ್ನು ಸಾಗಿಸುತ್ತಿದ್ದ ಟ್ರಕ್ ಒಂದಕ್ಕೆ ರಾಷ್ಟ್ರೀಯ ಹೆದ್ದಾರಿ ೬ರಲ್ಲಿ ಬೆಳಗ್ಗೆ ಲಕ್ಷುರಿ ಬಸ್ಸೊಂದು ಗುದ್ದಿದೆ. ಪೂರಿಯಿಂದ ಕಲ್ಕತಾಗೆ ಬಸ್ ಹಿಂದಿರುಗುತ್ತಿತ್ತು" ಎಂದು ಪೊಲೀಸರು ಹೇಳಿದ್ದಾರೆ.
ಬಸ್ ಅತಿ ವೇಗವಾಗಿ ಚಲಿಸುತ್ತಿದ್ದರಿಂದ ಕಬ್ಬಿಣದ ಸರಳುಗಳು ಬಸ್ ಒಳಗೆ ತೂರಿಕೊಂಡಿವೆ ಎಂದು ಪೊಲೀಸರು ಹೇಳಿದ್ದಾರೆ. ಮಂಜು ಕವಿದ ವಾತಾವರಣದಿಂದ ರಸ್ತೆ ಸರಿಯಾಗಿ ಕಾಣದೆ ಇರುವದು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಕೂಡ ತಿಳಿಯಲಾಗಿದೆ.
ಹೌರಾದ ಉಲುಬೇರಿಯಾ ಆಸ್ಪತ್ರೆಗೆ ಗಾಯಗೊಂಡವರನ್ನು ದಾಖಲಿಸಲಾಗಿದೆ. "ಈ ಅಪಘಾತದ ನಂತರ ಚಾಲಕ ಮತ್ತು ಸಹಾಯಕ ಪರಾರಿಯಾಗಿದ್ದು ಅವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಜಾರಿಯಲ್ಲಿದೆ" ಎಂದು ಪೊಲೀಸರು ಹೇಳಿದ್ದಾರೆ.