ಉತ್ತರ ಕನ್ನಡ: ಜೋಯಿಡಾ ತಾಲೂಕು ಈಗ ಕರ್ನಾಟಕದ ಬೇಡಿಕೆಯಿರುವ ಹೊಸ ಪಕ್ಷಿವೀಕ್ಷಣಾ ತಾಣ

ಪಶ್ಚಿಮ ಘಟ್ಟಗಳ ಪಕ್ಷಿ ಸಂಕುಲದ ಸುಧಾರಿತ ವೀಕ್ಷಣೆಯೊಂದಿಗೆ, ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕು ಈಗ ರಾಜ್ಯದಲ್ಲಿ ಹೆಚ್ಚು ಬೇಡಿಕೆಯಿರುವ ಪಕ್ಷಿವೀಕ್ಷಣೆಯ ತಾಣವಾಗಿದೆ. ವಿವಿಧ ರಾಜ್ಯಗಳ ಪಕ್ಷಿ ಛಾಯಾಗ್ರಾಹಕರು ಮತ್ತು ಪಕ್ಷಿ ಪ್ರಿಯರು ಇಲ್ಲಿ ಹೇರಳವಾಗಿರುವ ಶ್ರೀಮಂತ ಪಕ್ಷಿಸಂಕುಲವನ್ನು ವೀಕ್ಷಿಸಲು ಇಲ್ಲಿಗೆ ಆಗಮಿಸುತ್ತಿದ್ದಾರೆ.
ಜೋಯ್ಡಾ ತಾಲೂಕಿನಲ್ಲಿ ಕಂಡುಬರುವ ಏಷಿಯನ್ ಪೈಡ್ ಹಾರ್ನ್‌ಬಿಲ್ ಮತ್ತು ಮಲಬಾರ್ ಹಾರ್ನ್‌ಬಿಲ್
ಜೋಯ್ಡಾ ತಾಲೂಕಿನಲ್ಲಿ ಕಂಡುಬರುವ ಏಷಿಯನ್ ಪೈಡ್ ಹಾರ್ನ್‌ಬಿಲ್ ಮತ್ತು ಮಲಬಾರ್ ಹಾರ್ನ್‌ಬಿಲ್

ಹುಬ್ಬಳ್ಳಿ/ಜೋಯಿಡಾ: ಪಶ್ಚಿಮ ಘಟ್ಟಗಳ ಪಕ್ಷಿ ಸಂಕುಲದ ಸುಧಾರಿತ ವೀಕ್ಷಣೆಯೊಂದಿಗೆ, ಜೋಯಿಡಾ ತಾಲೂಕು ಈಗ ರಾಜ್ಯದಲ್ಲಿ ಹೆಚ್ಚು ಬೇಡಿಕೆಯಿರುವ ಪಕ್ಷಿವೀಕ್ಷಣೆಯ ತಾಣವಾಗಿದೆ. ಮಹಾರಾಷ್ಟ್ರ, ಕೇರಳ, ಗೋವಾ ಮತ್ತು ಆಂಧ್ರಪ್ರದೇಶದ ಪಕ್ಷಿ ಛಾಯಾಗ್ರಾಹಕರು ಮತ್ತು ಪಕ್ಷಿ ಪ್ರಿಯರು ಹೇರಳವಾಗಿರುವ ಶ್ರೀಮಂತ ಪಕ್ಷಿಸಂಕುಲವನ್ನು ವೀಕ್ಷಿಸಲು ಜೋಯಿಡಾ ತಾಲ್ಲೂಕಿಗೆ ಆಗಮಿಸುತ್ತಿದ್ದಾರೆ.

ಹಲವಾರು ಅಂಜೂರದ ಮರಗಳು (ಫಿಕಸ್) ಮತ್ತು ಇತರ ಕಾಡು ಮರಗಳಲ್ಲಿ ಹೆಚ್ಚಿನ ಹಣ್ಣುಗಳು ಇದ್ದು, ಹಾರ್ನ್‌ಬಿಲ್‌ಗಳು ಈ ಮರಗಳ ಸುತ್ತಲೂ ಹಾರುವುದನ್ನು ಕಾಣಬಹುದು. ಇದು ಹಲವಾರು ಛಾಯಾಗ್ರಾಹಕರನ್ನು ಆಕರ್ಷಿಸುತ್ತದೆ. ಪುಣೆ ಮತ್ತು ಹೈದರಾಬಾದ್‌ನಿಂದ ಅನೇಕ ಪಕ್ಷಿ ವೀಕ್ಷಕ ಗುಂಪುಗಳು ನಿಯಮಿತವಾಗಿ ಜೋಯಿಡಾ ತಾಲೂಕಿನಲ್ಲಿ ಬಿಡಾರ ಹೂಡುತ್ತಿವೆ.

ಹಲವಾರು ವರ್ಷಗಳ ಕಾಲ ಹಣ್ಣು ಬಿಡುವ ಮರಗಳನ್ನು ನೆಡುತ್ತಿರುವ ಅರಣ್ಯ ಇಲಾಖೆಗೆ ಮತ್ತು ಪಕ್ಷಿಗಳಿಗೆ ವಿಶೇಷವಾಗಿ ದೊಡ್ಡ ಹಾರ್ನ್‌ಬಿಲ್‌ಗಳಿಗೆ ಹಾನಿ ಮಾಡದಂತೆ ಗ್ರಾಮಸ್ಥರಲ್ಲಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುತ್ತಿರುವ ಸ್ಥಳೀಯ ವನ್ಯಜೀವಿ ಕಾರ್ಯಕರ್ತರಿಗೆ ಪಕ್ಷಿ ತಜ್ಞರು ಗೌರವ ಸಲ್ಲಿಸುತ್ತಾರೆ.

ದಾಂಡೇಲಿಯ ಹೆಸರಾಂತ ಪಕ್ಷಿವೀಕ್ಷಕ ಮಾರ್ಗದರ್ಶಿ ರಜನಿ ರಾವ್, 'ಪಕ್ಷಿ ಛಾಯಾಗ್ರಾಹಕರು ವರ್ಷವಿಡೀ ದಾಂಡೇಲಿಗೆ ಬರುತ್ತಾರೆ. 'ಗಣೇಶಗುಡಿಯ ಹಳೆಯ ಮ್ಯಾಗಜೀನ್ ಹೌಸ್‌ನಲ್ಲಿರುವ ಜೆಎಲ್‌ಆರ್ ಪ್ರಾಪರ್ಟಿ ಮತ್ತು ದಾಂಡೇಲಿಯ ಓಲ್ಡ್ ಟಿಂಬರ್ ಡಿಪೋ ಯಾವಾಗಲೂ ಪಕ್ಷಿವೀಕ್ಷಣೆಗೆ ಹೆಚ್ಚು ಆದ್ಯತೆಯ ತಾಣಗಳಾಗಿವೆ. ಆದಾಗ್ಯೂ, ಕಳೆದ ಕೆಲವು ವರ್ಷಗಳಲ್ಲಿ, ಜೋಯಿಡಾ ತಾಲ್ಲೂಕಿನಲ್ಲಿ ಅರಣ್ಯ ಮಾರ್ಗಗಳು ಮತ್ತು ಕೆರೆ ತಳ ಸೇರಿದಂತೆ ಹೊಸ ತಾಣಗಳಲ್ಲಿ ಪಕ್ಷಿಗಳ ಸಂಖ್ಯೆ ಹೆಚ್ಚಾಗಿದೆ' ಎಂದು ಅವರು ಹೇಳಿದರು.

ಮುಂಗಾರು ಹೊರತುಪಡಿಸಿ, ಉಳಿದ ವರ್ಷದ ಎಲ್ಲಾ ಕಾಲವೂ ಪಕ್ಷಿಗಳ ಕಾಲ. ಹಾರ್ನ್‌ಬಿಲ್‌ಗಳು, ಟ್ರೋಗನ್‌ಗಳು, ಫ್ರಾಗ್‌ಮೌತ್‌ಗಳು ಮತ್ತು ಇಂಡಿಯನ್ ಪಿಟ್ಟಾ ಈ ಪ್ರದೇಶದಲ್ಲಿ ಛಾಯಾಚಿತ್ರ ಮಾಡಲು ಹೆಚ್ಚು ಆದ್ಯತೆಯ ಪಕ್ಷಿಗಳಾಗಿವೆ.

ಕಳೆದ ಕೆಲವು ವರ್ಷಗಳಿಂದ ಈ ರೆಕ್ಕೆಯ ಸುಂದರಿಯರ ಬಗ್ಗೆ ಉಂಟಾಗುತ್ತಿರುವ ಹೆಚ್ಚಿನ ಜಾಗೃತಿಯಿಂದ ಜೋಯಿಡಾ ತಾಲೂಕು ಪಕ್ಷಿಗಳ ಸ್ವರ್ಗವಾಗಿದೆ ಎಂದು ಕಾಡುಮನೆ ಪ್ರಾಪರ್ಟಿಯ ಮಾಲೀಕ ನರಸಿಂಹ ಚಂಪಕಾಂತ್ ವಿವರಿಸಿದರು.

ಹೋಮ್‌ಸ್ಟೇ ಮಾಲೀಕ ವಿಕ್ರಂ ಸೋಗಿ, 'ಪಕ್ಷಿವೀಕ್ಷಣೆ ಮತ್ತು ಕಾಡಿನಲ್ಲಿ ಪಕ್ಷಿಗಳ ಪ್ರಾಮುಖ್ಯತೆಯ ಬಗ್ಗೆ ತಿಳಿದುಕೊಳ್ಳಲು ತಮ್ಮ ಅತಿಥಿಗಳನ್ನು ಪ್ರೋತ್ಸಾಹಿಸುವುದು ಹೋಂಸ್ಟೇಗಳಿಗೆ ಮುಖ್ಯವಾಗಿದೆ' ಎಂದು ಅಭಿಪ್ರಾಯಪಟ್ಟರು.

'ಪರಿಸರ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿರುವ ಹೋಮ್‌ಸ್ಟೇಗಳು ಮತ್ತು ರೆಸಾರ್ಟ್‌ಗಳು ಪಕ್ಷಿಗಳ ಚಟುವಟಿಕೆಗಳ ಮೂಲಕ ಜನಪ್ರಿಯತೆಯನ್ನು ಗಳಿಸುತ್ತಿವೆ. ದಾಂಡೇಲಿಯಲ್ಲಿ ಹಲವು ಹೋಂಸ್ಟೇ ನಿರ್ವಾಹಕರು ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಇದು ಪ್ರಕೃತಿಗೆ ವಿರುದ್ಧವಾಗಿದೆ ಮತ್ತು ಅಂತಹ ಪ್ರಯತ್ನಗಳನ್ನು ಪ್ರೋತ್ಸಾಹಿಸಬಾರದು. ದೀರ್ಘಾವಧಿಯ ಪರಿಸರ ಪ್ರವಾಸೋದ್ಯಮಕ್ಕೆ ಹೆಚ್ಚು ವಾಣಿಜ್ಯೀಕರಣ ಒಳ್ಳೆಯದಲ್ಲ' ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com